
ಕೇಂದ್ರದಿಂದ ಸ್ಥಳೀಯ ಸಂಸ್ಥೆಗಳ ದುರ್ಬಲಗೊಳಿಸುವ ಪ್ರಯತ್ನ : ಶಾಸಕ ಮಾನೆ
ಹಾನಗಲ್: ಗ್ರಾಮೀಣ ಕೂಲಿಕಾರರು ಮತ್ತು ರೈತರ ಜೀವನೋಪಾಯಕ್ಕೆ ಆಧಾರವಾಗಿದ್ದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯ ಹೆಸರು ಬದಲಿಸಿ ಕೇಂದ್ರ ಸರ್ಕಾರ ರಾಷ್ಟ್ರಪಿತನಿಗೆ ಅಗೌರವ ತೋರಿದ್ದಲ್ಲದೇ, ಗ್ರಾಮೀಣರ ಉದ್ಯೋಗದ ಹಕ್ಕು ಕಸಿದುಕೊಂಡಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಆಕ್ರೋಶ ವ್ಯಕ್ತಪಡಿಸಿದರು.
ಶುಕ್ರವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ೨೦ ವರ್ಷಗಳ ಹಿಂದೆ ಯುಪಿಎ ಆಡಳಿತದ ಅವಧಿಯಲ್ಲಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ಜನತೆಗೆ ಉದ್ಯೋಗವನ್ನು ಸ್ಥಳೀಯವಾಗಿ ಕೇಳಿ ಪಡೆಯುವ ಹಕ್ಕು ನೀಡಿದ್ದರು. ಮಹತ್ವಾಕಾಂಕ್ಷೆಯ ಯೋಜನೆಯನ್ನು ಮೋದಿ ಸರ್ಕಾರ ಜನರ ಜೊತೆಗೆ ಚರ್ಚಿಸದೇ, ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸದೇ, ಅಭಿಪ್ರಾಯ ಸಂಗ್ರಹಿಸದೇ ಸರ್ವಾಧಿಕಾರಿ ಧೋರಣೆಯ ಮೂಲಕ ಧ್ವಂಸ ಮಾಡುವ ಮೂಲಕ ಸಂವಿಧಾನ ವಿರೋಧಿ ಧೋರಣೆ ಅನುಸರಿಸಿದೆ ಎಂದು ಕಿಡಿಕಾರಿದರು.
ಮನರೇಗಾದಡಿ ಯಾವ ಕೆಲಸಗಳನ್ನು ಮಾಡಬೇಕು ಎನ್ನುವುದನ್ನು ಗ್ರಾಮಸಭೆ ಮತ್ತು ಗ್ರಾಮ ಪಂಚಾಯಿತಿಗಳೇ ತೀರ್ಮಾನಿಸುತ್ತಿದ್ದವು. ಸ್ಥಳೀಯ ಅಗತ್ಯಕ್ಕೆ ತಕ್ಕಂತೆ ಯೋಜನೆ ರೂಪಿಸುವ ಸಂಪೂರ್ಣ ಸ್ವಾತಂತ್ರ್ಯ ಇತ್ತು. ಯಾರ ಮುಲಾಜಿಗೂ ಒಳಗಾಗದೇ ಬಡಜನರು ವರ್ಷಪೂರ್ತಿ ಬೇಡಿಕೆಯ ಆಧಾರದ ಮೇಲೆ ಉದ್ಯೋಗ ಪಡೆಯುವ ವ್ಯವಸ್ಥೆ ಇತ್ತು. ಅದಕ್ಕೀಗ ಕೇಂದ್ರ ಸರ್ಕಾರ ತಿಲಾಂಜಲಿ ನೀಡಿದೆ. ದಿಲ್ಲಿಯಲ್ಲಿ ಕುಳಿತು ಹಳ್ಳಿಯಲ್ಲಿ ಏನು ಆಗಬೇಕು ಎಂದು ನಿರ್ಧರಿಸುವುದು ಸರಿಯಲ್ಲ. ಮನರೇಗಾ ಮೂಲ ಉದ್ದೇಶಕ್ಕೆ ಕತ್ತರಿ ಹಾಕಲಾಗಿದ್ದು, ಸ್ಥಳೀಯ ಸಂಸ್ಥೆಗಳನ್ನೇ ದುರ್ಬಲಗೊಳಿಸುವ ಪ್ರಯತ್ನ ನಡೆದಿದೆ ಎಂದರು.
ಸಾಮಾನ್ಯವಾಗಿ ಜನವರಿಯಿಂದ ಮೇ ವರೆಗೆ ಮನರೇಗಾದಡಿ ಸಾಕಷ್ಟು ಕೆಲಸಗಳು ನಡೆಯುತ್ತಿದ್ದವು. ಗ್ರಾಮೀಣರಿಗೂ ಹೆಚ್ಚು ಉದ್ಯೋಗ ಲಭಿಸುತ್ತಿತ್ತು. ಆದರೆ ಮೇ ತಿಂಗಳು ಮುಗಿಯುತ್ತಾ ಬಂದರೂ ಮನರೇಗಾ ಹೊಸ ಸ್ವರೂಪದ ಬಗ್ಗೆ ಸೂಕ್ತ ಮಹಿತಿ ಇಲ್ಲದೇ ಮಹತ್ವಾಕಾಂಕ್ಷೆಯ ಯೋಜನೆ ಹಳ್ಳ ಹಿಡಿದಿದೆ. ಅಲ್ಲದೇ ಅಭಿವೃದ್ಧಿಗೆ ಸಾಕಷ್ಟು ಹಿನ್ನಡೆ ಉಂಟಾಗುತ್ತಿದ್ದು, ಮೂಲಸೌಕರ್ಯಗಳಿಂದ ಜನರನ್ನು ವಂಚಿತರನ್ನಾಗಿಸಲಾಗುತ್ತಿದೆ. ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮನರೇಗಾ ವರ್ಷದಿಂದ ವರ್ಷಕ್ಕೆ ಸೊರಗುತ್ತಾ ಸಾಗಿದೆ. ೨೦೨೪-೨೫ ನೇ ಸಾಲಿನಲ್ಲಿ ತಾಲೂಕಿನಲ್ಲಿ ೨೬ ಕೋಟಿ ರೂ. ಅನುದಾನ ಮನರೇಗಾದಡಿ ಲಭಿಸಿದ್ದರೆ ೨೦೨೫-೨೬ ರಲ್ಲಿ ಕೇವಲ ೧೦ ಕೋಟಿ ರೂ. ಇಳಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಶಕ್ತವಾದ ಗ್ರಾಮೀಣ ಭಾರತವನ್ನು ನಿರ್ಮಾಣ ಮಾಡಬೇಕು. ಗ್ರಾಮೀಣ ಆರ್ಥಿಕತೆ ಸುಧಾರಿಸಿದರೆ ದೇಶ ಪ್ರಗತಿ ಪಥದಲ್ಲಿ ಮುನ್ನಡೆಯುತ್ತದೆ ಎನ್ನುವ ಗಾಂಧೀಜಿ ಅವರ ಕನಸುಗಳನ್ನು ಪ್ರೇರಣೆಯಾಗಿಟ್ಟುಕೊಂಡು ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಮನರೇಗಾ ಸೇರಿದಂತೆ ಬಹುಪಾಲು ಯೋಜನೆಗಳನ್ನು ಹಾಳು ಮಾಡಿರುವುದೇ ಎನ್ಡಿಎ ಸರ್ಕಾರದ ೧೧ ವರ್ಷಗಳ ಸಾಧನೆ ಎಂದು ಹರಿಹಾಯ್ದ ಶಾಸಕ ಮಾನೆ, ಸಾರ್ವಜನಿಕರ ಹಿತದೃಷ್ಟಿಯಿಂದ ಮನರೇಗಾ ಮುಂದುವರೆಸುವುದು ಅನಿವಾರ್ಯ. ೨೦೨೪ ನೇ ಸಾಲಿನಲ್ಲಿ ಬೆಳೆಹಾನಿ ಪರಿಹಾರವನ್ನು ಕೋರ್ಟ್ ಮೊರೆ ಹೋಗಿ ಪಡೆದಂತೆ ಮನರೇಗಾ ಪುನರ್ಸ್ಥಾಪನೆಗೆ ಸುಪ್ರೀಂ ಕೋರ್ಟ್ಗೆ ಮೊರೆ ಹೋಗಲಾಗುವುದು ಎಂದು ಶಾಸಕ ಮಾನೆ ತಿಳಿಸಿದರು.

