
ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ
ಹಾವೇರಿ: ಯುವ ಜನಾಂಗ ದುಂದು ವೆಚ್ಚ ದೂರ ಮಾಡಲು ಹೆಚ್ಚೆಚ್ಚು ಸರಳ ಸಾಮೂಹಿಕ ವಿವಾಹದಂತಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ ಸಮ ಸಮಾಜ ನಿರ್ಮಾಣ ಮಾಡಲು ಶ್ರಮಿಸಬೇಕೆಂದು ಮಾಜಿ ಶಾಸಕ ನೆಹರು ಓಲೆಕಾರ್ ಹೇಳಿದರು. ಗುರುವಾರ ಇಲ್ಲಿನ ಮಹರ್ಷಿ ವಾಲ್ಮೀಕಿ ಸಮುದಾಯ ಭವನದಲ್ಲಿ ಸುವರ್ಣ ಕರ್ನಾಟಕ ಕಿಸಾನ್ ಕಲ್ಯಾಣ ಸಂಘ ಬೆಂಗಳೂರು ಇವರು ಏರ್ಪಡಿಸಿದ್ದ ಸರಳ ಸಾಮೂಹಿಕ ಕಲ್ಯಾಣ ಮಹೋತ್ಸವವನ್ನು ಸಂವಿಧಾನ ಪೀಠಿಕೆ ಪಟಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಅಗಡಿ ಅಕ್ಕಿಮಠದ ಗುರುಲಿಂಗ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಸಂಘ ಸಮಾಜ ಮುಖಿಯಾದ ಕೆಲಸವನ್ನು ಮಾಡುತ್ತಾ ಬರುತ್ತಿದ್ದು, ಬುದ್ದ, ಬಸವ, ಅಂಬೇಡ್ಕರ್ ಅವರ ಕನಸನ್ನು ನನಸು ಮಾಡಲು ಶ್ರಮಿಸುತ್ತಿದ್ದು, ಸಂಘದ ಅಧ್ಯಕ್ಷ ಶಿವಕುಮಾರ್ ತಳವಾರ್ ನಾವು ಸಮಾಜದಲ್ಲಿ ಹುಟ್ಟಿದ ಮೇಲೆ ನಾವು ಸಹ ಸಮಾಜಕ್ಕೆ ಸ್ಪಂದಿಸಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡಿದ್ದಾರೆ. ಕನಿಷ್ಠ ಖರ್ಚಿನಲ್ಲಿ ವಿವಾಹಗಳು ನೆರವೇರಬೇಕು, ಪಾಲಕರಿಗೆ ಮದುವೆ ಹೊರೆಯಾಗಬಾರದು ಎಂಬ ಕಲ್ಪನೆ ಯೊಂದಿಗೆ ಈ ಸರಳ ಸಾಮೂಹಿಕ ವಿವಾಹ ಏರ್ಪಡಿಸಿದ್ದಾರೆ. ಇಂತಹ ಯುವಕರು ಸಮಾಜಕ್ಕೆ ಮಾದರಿ ಎಂದರು.
ಸಂಘದ ಅಧ್ಯಕ್ಷ ಶಿವಕುಮಾರ್ ತಳವಾರ್ ಮಾತನಾಡಿ ಇಂತಹ ಸಾಮೂಹಿಕ ವಿವಾಹಗಳಿಗೆ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರು ಸ್ಪೂರ್ತಿ ಎಂದರು. ಸಂಘ ಸಮಾಜಕ್ಕೆ ಒಳ್ಳೆಯ ಕೆಲಸಗಳನ್ನು ಮಾಡಿ ತೋರಿಸಬೇಕಾಗಿದೆ. ಇದೇ ರೀತಿ ನಿಮ್ಮ ಸಹಾಯ-ಸಹಕಾರ ಇದ್ದರೆ ನಾವು ಹೆಚ್ಚು ಸಮಾಜಮುಖಿ ಕೆಲಸ ಮಾಡಲು ಸದಾ ಸಿದ್ದ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಮೇಶ ಆನಮಟ್ಟಿ, ಡಿ.ಎಸ್. ಮಾಳಗಿ, ಹೊನ್ನಪ್ಪ ಮರಿಯಮ್ಮನವರ್, ಶೇಖರಪ್ಪ ಕಳ್ಳಿಮನಿ, ಬಸವರಾಜ್ ಹಾದಿಮನಿ, ಪಂಚಪ್ಪ ತೋಲಕೊಪ, ಉಡಚಪ್ಪ ಮಾಳಗಿ, ರಮೇಶ್ ದುಗ್ಗತ್ತಿ ,ಕೃಷ್ಣ ಕದಂ, ನಾಗಪ್ಪ ಕರ್ಜಿಗಿ, ನಾಗಪ್ಪ ದೊಡ್ಡನವರ್, ಮಂಜುನಾಥ್ ಕರಂಡಿ, ಶೇಖರಪ್ಪ ಉದ್ಧಣ್ಣನವರ್, ಮಂಜುನಾಥ್ ಮೂಗದೂರ್, ಹುಸೇನ್ ಹಳೆಮನೆ ಮುಂತಾದವರು ಭಾಗವಹಿಸಿದ್ದರು. ಸಂಘದ ಉಪಾಧ್ಯಕ್ಷ ಕೃಷ್ಣ ಜವಳಿ ನಿರೂಪಿಸಿದರು.

