
ಎಸ್ ಸಿ -ಎಸ್ ಟಿ ಪತ್ರಕರ್ತರ ಸಮಸ್ಯೆ ಆಲಿಸಲು ಅಧ್ಯಯನ ಸಮಿತಿಯಿಂದ ಜಿಲ್ಲಾವಾರು ಪ್ರವಾಸ
ಬೆಂಗಳೂರು ಜು.4- ರಾಜ್ಯದ ಎಸ್ ಸಿ -ಎಸ್ ಟಿ ಪತ್ರಿಕಾ ಮಾಲೀಕರ ಹಾಗೂ ಪತ್ರಕರ್ತರ ಆರ್ಥಿಕ, ಸಾಮಾಜಿಕ ಹಾಗೂ ಔದ್ಯಮಿಕ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸರ್ಕಾರ ನೇಮಿಸಿರುವ ಸಮಿತಿ ಮುಂದಿನ ತಿಂಗಳಿನಿಂದ ಎಲ್ಲ ಜಿಲ್ಲೆಗಳಲ್ಲಿ ಪ್ರ ವಾಸ ಕೈಗೊಳ್ಳಲಿದೆ.
ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ತರಬೇತಿ, ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಸಮಾಜ ಕಲ್ಯಾಣ ಇಲಾಖೆ ಆಯುಕ್ತರಾದ ಕೆ.ರಾಕೇಶಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜಿಲ್ಲಾ ಹಂತದಲ್ಲಿ ಅಧ್ಯಯನ ಕಾರ್ಯದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯೋಜನೆ ಪಡೆಯುವುದು.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು/ಉಪ ನಿರ್ದೇಶಕರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯೊಂದಿಗೆ ಕೋ ಆರ್ಡಿನೇಶನ್ ಹೊಂದುವುದು. ಸಮಿತಿ ಪ್ರವಾಸ ಸಂದರ್ಭದಲ್ಲಿ ಹಲವು ಪ್ರಮುಖ ಮಾಹಿತಿಗಳನ್ನು ಸಂಗ್ರಹಿಸಲು ಅನುಕೂಲವಾಗುವಂತೆ ಮೊದಲು ಪ್ರಶ್ನಾವಳಿ ಸಿದ್ಧಪಡಿಸಿ ಅದನ್ನು ಎಸ್ ಸಿ -ಎಸ್ ಟಿ ಎಲ್ಲ ಪತ್ರಕರ್ತರಿಗೆ ವಿತರಿಸಿ ಅವರಿಂದ ಉತ್ತರ ರೂಪದಲ್ಲಿ ಲಿಖಿತವಾಗಿ ವಿವರಣೆ ಪಡೆಯುವುದು.
ಮುದ್ರಣ ಮಾಧ್ಯಮ, ದ್ರಶ್ಯ ಮಾಧ್ಯಮ, ಸೋಶಿಯಲ್ ಮೀಡಿಯಾದಲ್ಲಿ ಕಾರ್ಯ ನಿರ್ವಹಿಸುವ ಈ ಸಮುದಾಯಗಳ ಎಲ್ಲ ಪತ್ರಕರ್ತರ ಅಭಿಪ್ರಾಯ ಪಡೆದು ವೃತ್ತಿಯಲ್ಲಿ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಕಂಡು ಹಿಡಿಯುವುದು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮಾನ್ಯತೆ ಪಡೆದ ಹಾಗೂ ಮಾನ್ಯತೆ ಪಡೆಯದಿರುವ ಪತ್ರಕರ್ತರ ಕುಂದುಕೊರತೆಗಳನ್ನು ಆಲಿಸುವುದು, ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಈ ಸಮುದಾಯಗಳ ಪತ್ರಕರ್ತರ ಸಮಸ್ಯೆಗಳನ್ನು ಆಲಿಸುವುದು, ಪತ್ರಿಕೋದ್ಯಮ ವಿಭಾಗ ಹೊಂದಿರುವ ವಿಶ್ವ ವಿದ್ಯಾಲಯಗಳಿಗೆ ಭೇಟಿ ನೀಡುವುದು.
ಈ ಪತ್ರಕರ್ತರಲ್ಲಿ ವ್ರತ್ತಿ ಕೌಶಲ್ಯ ಬೆಳೆಸಲು ತರಬೇತಿ ಕಾರ್ಯಾಗಾರಗಳನ್ನು ಏರ್ಪಡಿಸುವುದು. ಪತ್ರಿಕೋದ್ಯಮದ ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಅವರಲ್ಲಿ ವ್ರತ್ತಿ ನೈಪುಣ್ಯತೆ ಬೆಳೆಸಲು ಕೈಕೊಳ್ಳಬೇಕಾದ ಉತ್ತೇಜನ ಕ್ರಮಗಳು ಸೇರಿದಂತೆ ಇನ್ನಿತರ ಕೆಲವು ಮಹತ್ವದ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸಮಿತಿ ಸಿದ್ಧಪಡಿಸುವ ವರದಿ ವೈಜ್ಞಾನಿಕ ಮತ್ತು ವಸ್ತುನಿಷ್ಠವಾಗಿರಬೇಕು. ಅದು ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಒಂದು ಮಹತ್ವದ ಡಾಕ್ಯುಮೆಂಟರಿ ಆಗಿ ಉಳಿಯಬೇಕು. ಸಮಿತಿ ವರದಿಯಿಂದ ಸರ್ಕಾರ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಶೋಷಿತ ಸಮುದಾಯಗಳ ಪತ್ರಕರ್ತರನ್ನು ಮುಂಚೂಣಿಗೆ ತರಲು ಸೂಕ್ತ ಮಾರ್ಗದರ್ಶನ ನೀಡುವಂತಿರಬೇಕು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಯಿತು.
ಡಾ.ಬಿ.ಆರ್.ಅಂಬೇಡ್ಕರ್ ತರಬೇತಿ, ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರದ ನಿರ್ದೇಶಕ ಶಬ್ಬೀರ್ ಅಹ್ಮದ್ ಮುಲ್ಲಾ, ಯೋಜನಾಧಿಕಾರಿ ಮಹೇಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಡೊಳ್ಳಿನ, ಎಂಸಿಎ ಪ್ರತಿನಿಧಿ ಡಾ.ಕ್ರಷ್ಣ ಹಾಗೂ ಸಮಿತಿಯ ಸದಸ್ಯರಾದ ಶಿವಕುಮಾರ ಬೆಳ್ಳಿತಟ್ಟೆ, ಚೆಲುವರಾಜು, ಮುತ್ತು ನಾಯ್ಕರ ಉಪಸ್ಥಿತರಿದ್ದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಅನೇಕ ಉಪಯುಕ್ತ ಸಲಹೆಗಳನ್ನು ನೀಡಿದರು.

