ಅಲೆಮಾರಿ ಸಮುದಾಯಗಳ ಸೂರು ಕಿತ್ತುಕೊಂಡ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ, ಸುತ್ತೋಲೆ ವಾಪಾಸ ಪಡೆಯಲು ಆಗ್ರಹ
ಹಾವೇರಿ : ಪರಿಶಿಷ್ಟ ಜಾತಿ (ಎಸ್ಸಿ) (ಎಸ್ಟಿ) ಅಲೆಮಾರಿ ಸಮುದಾಯಗಳಿಗೆ ಸೂರು ನಿರ್ಮಿಸಲು ರಾಜೀವಗಾಂಧಿ ವಸತಿ ನಿಗಮದಿಂದ ಮನೆ ಮಂಜೂರಾದ ಯೋಜನೆಗೆ ಮೀಸಲಿದ್ದ ೩೦೦ ಕೋಟಿ ಅನುದಾನವನ್ನು ರಾಜ್ಯ ಸರ್ಕಾರ ವಾಪಾಸ ಪಡೆಯಲು ಹೊರಡಿಸಿರುವ ಸುತ್ತೋಲೆಯನ್ನು ಕೂಡಲೇ ವಾಪಾಸ ಪಡೆಯುವಂತೆ ಜಿಲ್ಲಾ ಅಲೆಮಾರಿ ಸಮಾಜದ ಅಧ್ಯಕ್ಷ ಶೆಟ್ಟಿ ವಿಭೂತಿ ಒತ್ತಾಯಿಸಿದ್ದಾರೆ.
ಊರಿಲ್ಲದ, ಸೂರಿಲ್ಲದ ಮತ್ತು ವಿಳಾಸವೂ ಇರದ ಲಕ್ಷಾಂತರ ಸಂಖ್ಯೆಯ ಅಲೆಮಾರಿ ಸಮುದಾಯಗಳಾದ ಹಕ್ಕಿಪಿಕ್ಕಿಗಳು, ಹಂದಿಜೋಗಿಗಳು, ಸುಡುಗಾಡು ಸಿದ್ಧರು, ಚನ್ನದಾಸರು, ಬುಡ್ಗಜಂಗಮರು, ದೊಂಬರು, ಕಿಳ್ಳೆಕ್ಯಾತರು, ಕೊರಚ, ಕೊರಮ ಮುಂತಾದ ಜನರಿಗೆ ಮನೆ ಕಟ್ಟಿಕೊಡಲು ಕಳೆದ ಎರಡು ವರ್ಷಗಳಿಂದ ಮೀಸಲಿರಿಸಿದ್ದ ೩೦೦ ಕೋಟಿ ಅನುದಾನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ವಾಪಸು ಪಡೆದಿದೆ. ಮನೆ ನಿರ್ಮಿಸಿಕೊಡಬೇಕಾದ ಸರ್ಕಾರ ದಾಖಲೆಗಳ ನೆಪ ಒಡ್ಡಿ ಅನುದಾನ ಹಿಂಪಡೆದಿರುವುದನ್ನು ನೋಡಿದರೆ ಸರ್ಕಾರಕ್ಕೆ ಅಲೆಮಾರಿಗಳಿಗೆ ಸೂರು ಒದಗಿಸುವ ಇಚ್ಚಾಶಕ್ತಿ ಇದ್ದಂತೆ ಕಾಣುತ್ತಿಲ್ಲ ಎಂದ ಅವರು ಆರೋಪಿಸಿದ್ದಾರೆ.
ಸರ್ಕಾರ ಅಲೆಮಾರಿಗಳಿಗೆ ಸೂರು ನಿರ್ಮಿಸಲು ಮೀಸಲಿಟ್ಟ ಅನುದಾನವನ್ನು ಮರಳಿ ನೀಡಬೇಕು. ಹರುಕು-ಮುರುಕ ಗುಡುಸಲಿನಲ್ಲಿ ವಾಸ ಇರುವ ಅಲೆಮಾರಿಗಳಿಗೆ ಸೂರು ನಿರ್ಮಿಸಿಕೊಡುವುದು ಸರ್ಕಾರ ಜವಾಬ್ದಾರಿಯಾಗಿದೆ. ಆದರೆ ಸರ್ಕಾರವೇ ಈಜನರಿಗೆ ಸೂರು ನಿರ್ಮಿಸಿಕೊಡುವ ಬದಲು ಸೂರು ನಿರ್ಮಿಸಲು ನಿಗದಿಯಾಗಿದ್ದ ಹಣವನ್ನು ವಾಪಾಸ ಪಡೆದಿರುವುದು ದುದೈವದ ಸಂಗತಿಯಾಗಿದೆ. ಅಲೆಮಾರಿಗಳ ಬಗ್ಗೆ ಸರ್ಕಾರಕ್ಕೆ ಕಿಂಚಿತ್ ಕಾಳಜಿ ಇದ್ದರೆ ಕೂಡಲೆ ಹಣವನ್ನು ಮರಳಿ ನೀಡುವಂತೆ ಶೆಟ್ಟಿ ವಿಭೂತಿ ಒತ್ತಾಯಿಸಿದ್ದಾರೆ.