ಚುನಾವಣೆ ಘೋಷಣೆಗೂ ಮುನ್ನವೇ
ಹಾವೇರಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಕಾವೇರಿದ ಪ್ರಚಾರ….!
* ಟಿಕೆಟ್ ಆಕಾಂಕ್ಷಿಗಳಿಂದ ಭರ್ಜರಿ ಪ್ರಚಾರ
* ಸದ್ಯಕ್ಕಿಲ್ಲ ಪ್ರಚಾರದ ಭರಾಟೆಗೆ ಸರ್ಜರಿ
* ಅಲ್ಲಿ ಮತದಾರರಿಗೆ ಕುಕ್ಕರ್, ಪ್ಯಾಂಟ್ ,ಶರ್ಟ, ಸೀರೆ! ಇಲ್ಲಿ ಕನಿಷ್ಠ ಚಡ್ಡಿಯು ಇಲ್ಲ!
* ಎಲ್ಲ ಕ್ಯಾಲೆಂಡ್ಗಳಲ್ಲಿ ಅದೇ ಹಳ್ಳಣ್ಣೆಮುಖಗಳು!.
ಹಾವೇರಿ: ಬಹುತೇಕ ಮೇ ತಿಂಗಳಲ್ಲಿ ನಡೆಯಬಹುದಾದ ವಿಧಾನಸಭಾ ಚುನಾವಣೆಗೆ ಟಿಕೆಟ್ ಆಕಾಂಕ್ಷಿ ಅಭ್ಯರ್ಥಿಗಳಿಂದ ಭರ್ಜರಿ ಪ್ರಚಾರ ಭರಾಟೆ ನಡೆದಿದೆ. ಚುನಾವಣೆಯ ದಿನಾಂಕ ಘೋಷಣೆಯಾದರೇ ಚುನಾವಣಾ ಆಯೋಗದಿಂದ ಎದುರಾಗುವ ಕಠಿಣ ನೀತಿ ಸಂಹಿತೆಯ ಕಾರಣಕ್ಕೆ ಈ ಬಾರಿ ಚುನಾವಣೆ ಘೋಷಣೆಗೂ ಮುನ್ನವೇ ಎಲ್ಲ ಪಕ್ಷಗಳ ಅಭ್ಯರ್ಥಿಗಳು ಮೂರ್ನಾಲ್ಕು ಸುತ್ತಿನ ಪ್ರಚಾರ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಇದಕ್ಕೆ ಹಾವೇರಿ ಮೀಸಲು ವಿಧಾನಸಭಾ ಕ್ಷೇತ್ರವು ಹೊರತಾಗಿಲ್ಲ. ಹಾವೇರಿ ಮೀಸಲು ಕ್ಷೇತ್ರ ಈ ಬಾರಿ ವಿಚಿತ್ರ ತಿರುವು ಪಡೆದುಕೊಳ್ಳುವ ಎಲ್ಲ ಸಾಧ್ಯತೆಗಳಿವೆ.
“ಜಿಲ್ಲೆಯ ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರವನ್ನು ಗಮನಿಸಿದಾಗ ಆ ಕ್ಷೇತ್ರದ ಮತದಾರರು ಅದೃಷ್ಟವಂತರೆಂದು ಹಾವೇರಿಯ ಮೀಸಲು ಕ್ಷೇತ್ರದ ಕೆಲವು ಮತದಾರರ ಪ್ರಭುಗಳು ಮಾತನಾಡಿಕೊಳ್ಳುವುದು ಸಾಮಾನ್ಯವಾಗಿದೆ”. ಇದಕ್ಕೆ ಕಾರಣ ಪಕ್ಕದ ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಕೆಲವು ಮತದಾರರ ಪ್ರಭುಗಳ ಮನಗೆ ಮತ ಹಾಕಿಸಿಕೊಳ್ಳುವ ೫ ವರ್ಷಕ್ಕೆ ಮಹಾರಾಜರಾಗುವ, ಕ್ಷೇತ್ರಕ್ಕೆ ೫ವರ್ಷಗಳ ಅಧಿಪತಿಯಾಗುವ ಕನಸು ಕಾಣುತ್ತಿರುವ ಕೆಲವರು ಕುಕ್ಕರ್, ಸೀರೆ, ಪ್ಯಾಂಟ್, ಶರ್ಟ, ಬನಿಯನ್, ತಟ್ಟೆ, ಲೋmಗಳನ್ನು ಹಂಚುತ್ತಿರುವ ಸುದ್ದಿಗಳು ಪತ್ರಿಕೆಗಳಲ್ಲಿ ಹಾಗೂ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಸುದ್ದಿಯನ್ನು ಗಮನಿಸಿರುವ ಹಾವೇರಿ ವಿಧಾನಸಭಾ ಕ್ಷೇತ್ರದ ಕೆಲವು ಮತದಾರ ಮಹಾಪ್ರಭುಗಳು “ಅಲ್ಲಿ ಕುಕ್ಕರ್ ಕೊಡುತ್ತಿದ್ದಾರೆ. ನಮ್ಮಲ್ಲಿ ನೋಡಿದರೆ ಬರಿ ಕ್ಯಾಲೆಂಡರ್ ನೀಡಿ ಕೈಮುಗಿದು ಹೋಗುತ್ತಿದ್ದಾರೆ. ಎಷ್ಟು ಜನರವು ಅಂತ ನಾವು ಕ್ಯಾಲೆಂಡರ್ ಹಾಕಿಕೊಳ್ಳುವುದು?. ಎಲ್ಲ ಕ್ಯಾಲೆಂಡ್ಗಳಲ್ಲಿ ಅದೇ ಹಳ್ಳಣ್ಣೆಮುಖಗಳು!. ಅಲ್ಲಿ ಕುಕ್ಕರ್, ಪ್ಯಾಂಟ್ ,ಶರ್ಟ, ಸೀರೆ ಕೊಡುತ್ತಿದ್ದಾರೆ. ಇವರು ಅವೇಲ್ಲಾ ಬೇಡ ಕನಿಷ್ಠ ಪಕ್ಷ ಚಡ್ಡಿಯನ್ನಾದರೂ ಕೊಡಬಾರದೆ…ಎನ್ನುವುದು ತೂತು ಬಿದ್ದ ಚಡ್ಡಿ ಧರಿಸಿದ ಕೆಲವು ಮತದಾgರ ಅಳಲಾಗಿದೆ.
“ಪ್ರಚಾರದಲ್ಲಿ ಹಾಲಿ ಶಾಸಕ ನೆಹರು ಓಲೆಕಾರ, ಇವರ ಪ್ರಭಲ ಎದುರಾಳಿ ಮಾಜಿ ಸಚಿವ ರುದ್ರಪ್ಪ ಲಮಾಣಿ ಹಿಂದಿದ್ದಾರೆ”. ಆದರೆ, “ಈ ಇಬ್ಬರು ಇರುವ ಪಕ್ಷದಲ್ಲಿನ ಟಿಕೆಟ್ ಆಕಾಂಕ್ಷಿಗಳು ಪ್ರಚಾರದಲ್ಲಿ ಮುಂದಿದ್ದು, ಚುನಾವಣೆ ಘೊಷಣೆಗೂ ಮುನ್ನವೇ ಕೊಡುಗೈದಾನಿಗಳಾಗಿ ಪ್ಲೆಕ್ಸ್ಗಳಲ್ಲಿ, ಕ್ಯಾಲೆಂಡಗಲ್ಲಿ ಮಿರ ಮಿರ ಮಿಂಚುತ್ತಿದ್ದಾರೆ”. ಯಾವುದೇ ಸಮಾರಂಭಗಳಿರಲಿ, ಮದುವೆ ಸೇರಿದಂತೆ ಜಾತ್ರೆ, ನಾಟಕ ಸೇರಿದಂತೆ ಯಾವುದೇ (ಶುಭ-ಅ ಶುಭ) ಶುಭಕಾರ್ಯಗಳಿರಲಿ ಅಲ್ಲಿಗೆ ಹಾಜಾರಾಗುವ ಟಿಕೆಟ್ ಆಕಾಂಕ್ಷಿಗಳು ವಧು-ವರನೊಂದಿಗೆ, ದೇವರುಗಳೊಂದಿಗೆ ಪೋಟೋ ಕ್ಲಿಕ್ಕಿಸಿಕೊಂಡು ವಾಟ್ಸಪ್, ಫೇಸ್ಬುಕ್ ಇನ್ಸ್ಟಾಗ್ರಾಗಳಲ್ಲಿ ಹರಿಬಿಡುತ್ತಾರೆ. ಇತ್ತ ಹಾಲಿ ಶಾಸಕ ನೆಹರು ಓಲೇಕಾರ ಅವರು ವಿರುದ್ಧ ಮಾಜಿ ಸಚಿವ ರುದ್ರಪ್ಪ ಲಮಾಣಿ ಅವರು ಇತ್ತೀಚೆಗೆ ನಡೆದ ಪ್ರಜಾಧ್ವನಿಯಾತ್ರೆಯಲ್ಲಿ ಮನೆಗಳ ಹಂಚಿಕೆಯ ಬಗ್ಗೆ ವಾಗ್ದಾಳಿ ನಡೆಸಿದ್ದರು, ಇದಕ್ಕೆ ಪ್ರತಿಯಾಗಿ ಶಾಸಕ ನೆಹರು ಓಲೇಕಾರ ತಮ್ಮ ಪ್ರಭಲ ಎದುರಾಳಿ ರುದ್ರಪ್ಪ ಲಮಾಣಿ ಅವರಿಗೆ ತಿರುಗೇಟ ನೀಡುವ ಮೂಲಕ ಆರೋಪಗಳ ಸುರಿಮಳೆಗೈದಿದ್ದರು.
ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಗಳು ಪ್ರಚಾರದಲ್ಲಿ ಒಂದು ಹೆಜ್ಜೆ ಮುಂದಿದ್ದಾರೆ ಎನ್ನಬಹುದಾಗಿದೆ. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ, ಎಪಿಎಂಸಿ ಮಾಜಿ ಸದಸ್ಯ ರಾಮು ಮಾಳಗಿ, ಮಲ್ಲಿಕಾರ್ಜುನ ಕೆ.ಬಿ, ವೆಂಕಟೇಶ ನಾರಾಯಣಿ ಸೇರಿದಂತೆ ಕೆಲವರು ಈಗಾಗಲೇ ಬೆಂಗಳೂರು, ಮಂಗಳೂರು, ದೆಹಲಿಯ ಮಾಯಕರುಗಳನ್ನು ಮುಟ್ಟಿ ಬಂದಿದ್ದಾರೆ. ಅವರುಗಳು ಪ್ರಚಾರದಲ್ಲಿ ಮುಂದಿದ್ದಾರೆ. ಹಾವೇರಿನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಇವರುಗಳು ಒಂದಿಲ್ಲ ಒಂದು ಕಾರಣಕ್ಕೆ ನಿತ್ಯ ಸುದ್ದಿಯಲ್ಲಿದ್ದಾರೆ. ಪರಮೇಶಪ್ಪ ಮೇಗಳನಮನಿ ಅವರು ಹಾವೇರಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಮೂರ್ನಾಲ್ಕು ಸುತ್ತು ಸಂಚರಿಸಿ ನಾನು ನಿಮ್ಮ ಮನೆಯ ಮಗ, ನನಗೆ ಆಶೀರ್ವದಿಸಿ ಎಂದು ಕ್ಯಾಲೆಂಡರ್ಗಳನ್ನು, ಕರಪತ್ರಗಳನ್ನು ಹಂಚುತ್ತಿದ್ದಾರೆ. ಇವರ ಬೆಂಬಲಿಗರು ನಿತ್ಯ ಕ್ಷೇತ್ರದಲ್ಲಿ ಓಡಾಡಿ ಮೇಗಳಮನಿ ಅವರ ಪರ ಭರ್ಜರಿ ಪ್ರಚಾರ ನಡೆಸಿರುವುದನ್ನು ಕಾಣಬಹುದಾಗಿದೆ.
ಇನ್ನುಳಿದಂತೆ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಸಹ ತಾವು ಕಮ್ಮಿ ಇಲ್ಲ ಎಂದು ತಮ್ಮ ಶಾಕ್ಯಾನುಸಾರ ದಾನಿಗಳಾಗಿ ಬಿಂಬಿಸಿಕೊಂಡು ಪ್ರಚಾರ ನಡೆಸಿದ್ದಾರೆ.
ಇನ್ನು ಕಾಂಗ್ರೆಸ್ನಲ್ಲಿಯು ಸಹ ಟಿಕೆಟ್ ಪೈಟ್ ಜೋರಾಗಿ ನಡೆಯುತ್ತಿದೆ. ಮಾಜಿ ಸಚಿವ ರುದ್ರಪ್ಪ ಲಮಾಣಿ ಅವರು ನಾನಾ ರೀತಿಯಲ್ಲಿ ಪ್ರಚಾರದಲ್ಲಿದ್ದಾರೆ. ಮಾಜಿ ಸಚಿವರಾಗಿರುವ ರುದ್ರಪ್ಪ ಲಮಾಣಿ ಅವರಿಗೆ ಕಾಂಗ್ರೆಸ್ ಪಕ್ಷದ ವರಿಷ್ಠರ ಬೆಂಬಲ ಇರುವುದು ಅವರ ಉತ್ಸಾಹವನ್ನು ಇಮ್ಮುಡಿಗೊಳಿಸಿದೆ. ಇತ್ತೀಚೆಗೆ ನಗರದಲ್ಲಿ ನಡೆದ ಪ್ರಜಾಧ್ವನಿಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ವಿರೋಧಪಕ್ಷದ ನಾಯಕ ಸಿದ್ದರಾಮಯ್ಯನವರು ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು ರುದ್ರಪ್ಪ ಲಮಾಣಿ ಅವರ ಹೆಸರನ್ನು ಉಲ್ಲೇಖಿಸಿರುವುದು ಗಮನಾರ್ಹವಾಗಿದೆ.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಈರಪ್ಪ ಲಮಾಣಿ ನಾನು ಸ್ಥಳೀಯ ನನಗೆ ಟಿಕೆಟ್ ಸಿಗುತ್ತದೆ, ನಾನು ನಿಮ್ಮಮನೆಯಮಗ ನನಗೆ ಬೆಂಬಲಿಸಿ ಎಂದು ಮತದಾರರನ್ನು ಬೆನ್ನುಬಿದ್ದಿದ್ದಾರೆ. ಡಾ.ಸಂಜಯ ಡಾಂಗೆ, ಪುಟ್ಟಪ್ಪ ಮರಿಯಮ್ಮನವರ, ಶಿವಕುಮಾರ ತಾವರಗಿ ಸೇರಿದಂತೆ ಕಾಂಗ್ರೆಸ್ನಲ್ಲಿ ಕೆಲವು ಟಿಕೆಟ್ ಆಕಾಂಕ್ಷಿಗಳು ತಮ್ಮದೇ ಆದ ಕಾರ್ಯತಂತ್ರದ ಮೂಲಕ ಕೆಪಿಸಿಸಿ ಹಾಗೂ ದೆಹಲಿಯ ವರಿಷ್ಠರನ್ನು ಟಿಕೆಟ್ಗಾಗಿ ಮನವಲಿಕೆಯ ಯತ್ನಮುಂದುವರೆಸಿದ್ದಾರೆ. ಟಿಕೆಟ್ ಒಂದೇ ಯಾರಿಗೆ ಟಿಕೆಟ್ ಸಿಗುತ್ತದೆಯೋ ಗೊತ್ತಿಲ್ಲ. ಅದರೆ ಪ್ರಯತ್ನಮುಂದುವರೆಸಿದ್ದಾರೆ.
ಜೆಡಿಎಸ್ ಪಕ್ಷದಲ್ಲಿ ಯಾವುದೇ ಗೊಂದಲಿಲ್ಲ. ಈಗಾಗಲೇ ಜೆಡಿಎಸ್ ವರಿಷ್ಠರು ಹಾವೇರಿ ಮೀಸಲು ಕ್ಷೇತ್ರಕ್ಕೆ ತುಕಾರಾಮ ಮಾಳಗಿ ಅವರ ಹೆಸರನ್ನು ಪ್ರಕಟಿಸಿದ್ದು, ಮಳಗಿ ಅವರು ತಮ್ಮ ಪಾಡಿಗೆ ತಾವು ಕ್ಷೇತ್ರದಲ್ಲಿ ಇರುವ ಪಕ್ಷದ ಕಾರ್ಯಕರ್ತರೊಂದಿಗೆ ಪ್ರಚಾರಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಇನ್ನು ಬಿಎಸ್ಪಿ ಪಕ್ಷದ ಜಿಲ್ಲಾ ಅಧ್ಯಕ್ಷ ಅಶೋಕ ಮರೆಣ್ಣನವರ ಹಾವೇರಿ ಮೀಸಲು ಕ್ಷೇತ್ರಕ್ಕೆ ಪಕ್ಷದ ಅಭ್ಯರ್ಥಿ ನಾನೆ ಎಂದು ಘೋಷಣೆಗೂ ಮುನ್ನವೇ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಹಾವೇರಿನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಇವರ ಪ್ರಚಾರದ ಪೋಸ್ಟರ್ಗಳು, ಗೋಡೆ ಬರಹಗಳು ರಾರಾಜಿಸುತ್ತಿವೆ.
ಚುನಾವಣೆಯ ದಿನಾಂಕ ಪ್ರಕಟಗೊಂಡು, ಆಯಾ ಪಕ್ಷಗಳು ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದ ಮೇಲೆ ಪಕ್ಷಾಂತರ ಪರ್ವ ಆರಂಭವಾಗುತ್ತದೆ. ಕೆವರನ್ನು ಮನವೊಲಿಸಬಹುದು, ಕೆಲವರು ಹಾರಾಟ, ತೂರಾಟ ನಡೆಸುವುದು ಸಹಜ. ಕೆಲವರು ಈಗಿರುವ ತಮ್ಮ ಹುದ್ದೆಯನ್ನು ತ್ಯಜೀಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಆದರೆ ಚುನಾವಣೆಯಲ್ಲಿ ನವರಂಗಿ ಆಟಗಳಂತು ಎಗ್ಗಿಲ್ಲದೇ ನಡೆಯುತ್ತವೆ. ಹಗಲುಹೊತ್ತು ಕೈ, ರಾತ್ರಿ ಹೊತ್ತು ಜೈ ಎನ್ನುವವರ ಸಂಖ್ಯೆ ಕಡಿಮೆಯಿಲ್ಲ. ಒಳ ಏಟಿನ ಮರ್ಮಗಳು, ಕರ್ಮಗಳು ನಡೆಯುತ್ತಲೇ ಇರುತ್ತವೆ. ಯಾರು ಯಾರಿಗೆ ಜೈ ಎನ್ನುತ್ತಾರೆ, ಯಾರು ಯಾರಿಗೆ ಸೈ ಎನ್ನುತ್ತಾರೆ ಎನ್ನುವುದಕ್ಕೆ ಕಾಲವೇ ಉತ್ತರ ನೀಡುತ್ತದೆ.
.ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಗೆ ಓಲೇಕಾರ ಟಾಂಗ್
ಹಾವೇರಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಗೆಲ್ಲುವು ಕುದುರೆನಾನೆ, ನನ್ನನ್ನು ಬಿಟ್ಟು ಬೇರೇಯಾರಿಗೆ ಟಿಕೆಟ್ ನೀಡುತ್ತಾರೆ. ಚುನಾವಣೆ ಎಂದ ಮೇಲೆ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುತ್ತದೆ. ರಾಜ್ಯ ವಿಧಾನಸಭಾ ಚುನಾವಣೆಯು ಮಹತ್ವದ ಚುನಾವಣೆಯಾಗಿದ್ದು, ಕ್ಷೇತ್ರದಲ್ಲಿ ಗೆಲ್ಲುವ ಕುದುರೆ ನಾನೆ. ಹೀಗಾಗಿ ಟಿಕೆಟ್ನ್ನು ವರಿಷ್ಠರು ನನಗೆ ನೀಡುತ್ತಾರೆ. ಹಾವೇರಿ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿರುವೆ. ಚುನಾವಣೆ ಹತ್ತಿರ ಬಂದಾಗ ಆಕಾಂಕ್ಷಿಗಳು ಇರುತ್ತಾರೆ. ಕಳೆದ ಚುನಾವಣೆಯಲ್ಲಿ ೧೬ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ಆಕಾಂಕ್ಷಿಗಳಿದ್ದರು. ಪ್ರಸಕ್ತ ಚುನಾವಣೆಯ ಸಂದರ್ಭದಲ್ಲಿ ಈ ಸಂಖ್ಯೆ ೧೪ಕ್ಕೆ ಇಳಿದಿದೆ. ಟಿಕೆಟ್ ಆಕಾಂಕ್ಷಿಗಳು ಸಹ ನಮ್ಮವರೆ ಆಗಿದ್ದಾರೆ. ಆಕಾಂಕ್ಷಿಗಳ ಸಂಖ್ಯೆ ಎಷ್ಟೇ ಇದ್ದರೂ ಸಹ ವರಿಷ್ಠರು ನನಗೆ ಬಿಜೆಪಿ ಟಿಕೆಟ್ ನೀಡುತ್ತಾರೆ ಎಂದು ಶಾಸಕ ನೆಹರು ಓಲೇಕಾರ ವಿಶ್ವಾಸ ವ್ಯಕ್ತಪಡಿಸಿದರು.