ಚುನಾವಣಾ ಅಕ್ರಮಗಳ ತಡೆಗಟ್ಟಲು ಧೈರ್ಯದಿಂದ ಕಾರ್ಯನಿರ್ವಹಿಸಿ: ಜಿಲ್ಲಾಧಿಕಾರಿ ರಘುನಂದನ ಮೂರ್ತಿ
ಹಾವೇರಿ: ಚುನಾವಣಾ ಅಕ್ರಮಗಳ ತಡೆಗಟ್ಟಲು ಯಾವುದೇ ಹಿಂಜರಿಕೆ ಬೇಡ, ಧೈಯದಿಂದ ಮುನ್ನುಗ್ಗಿ. ಯಾವುದೇ ಸಂದೇಹ ಹಾಗೂ ಸಂಶಯ ಬಂದ ತಕ್ಷಣವೇ ಸರ್ಚ್ಮಾಡಿ. ಯಾವುದಕ್ಕೂ ಹೇದರಬೇಡಿ ನಿಮ್ಮೊಂದಿಗೆ ಜಿಲ್ಲಾಡಳಿತವಿದೆ ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಅವರು ಚುನಾವಣಾ ಸಿಬ್ಬಂದಿಗಳಿಗೆ ಆತ್ಮವಿಶ್ವಾಸ ತುಂಬಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಚುನಾವಣಾ ನಿಯಮಾಳಿಗಳು, ಕಾಯ್ದೆಗಳ ಕುರಿತಂತೆ ಆಯೋಜಿಸಿದ ಒಂದು ದಿನದ ಕಾರ್ಯಾಗಾರದಲ್ಲಿ ಭಾಗವಹಿಸಿದ ಮಾದರಿ ನೀತಿ ಸಂಹಿತೆ ತಂಡ, ಫ್ಲೈಯಿಂಗ್ ಸ್ಕ್ವಾಡ್, ಎಸ್.ಎಸ್.ಟಿ. ಟೀಮ್, ಚೆಕ್ ಪೋಸ್ಟ್ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಒಳಗೊಂಡಂತೆ ಚುನಾವಣೆಗೆ ನಿಯೋಜಿತ ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿ, ನ್ಯಾಯ ಸಮ್ಮತ, ಪಾರದರ್ಶಕ ಹಾಗೂ ಶಾಂತಿಯುತ ಚುನಾವಣೆಗೆ ಎಲ್ಲರೂ ಜವಾಬ್ದಾರಿ ಅರಿತು ನಿಷ್ಠೆಯಿಂದ ಕಾರ್ಯನಿರ್ವಹಿಸಿ ಎಂದು ಸೂಚಿಸಿದರು.
ಚುನಾವಣೆ ಕೆಲಸ ಶಿಕ್ಷೆ ಎಂದು ಭಾವಿಸಬೇಡಿ, ಇದೊಂದು ಅಪೂರ್ವ ಅವಕಾಶವೆಂದು ಭಾವಿಸಿ. ಜವಾಬ್ದಾರಿ ಅರಿತು ಕೆಲಸಮಾಡಿ. ಅನಾವಶ್ಯಕವಾಗಿ ಅಧಿಕ ಪ್ರಸಂಗದಿಂದ ಬೇಜವಾಬ್ದಾರಿಯಿಂದ ಕೆಲಸ ನಿರ್ವಹಿಸಿದರೆ ನಿಮ್ಮ ಮೇಲೆ ಪ್ರಜಾ ಪ್ರಾತಿನಿಧಿಕ ಕಾಯ್ದೆಯ ಅನುಸಾರ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ನಿಮ್ಮೆಲರಿಗೂ ದಂಡಾಧಿಕಾರಿಗಳ ಅಧಿಕಾರ ನೀಡಿದ್ದೇವೆ. ಅಧಿಕಾರ ಪ್ರತ್ಯಾಯೋಜಿಸಲಾಗಿದೆ, ಈ ಅಧಿಕಾರಿಗಳನ್ನು ಚುನಾವಣಾ ಅಕ್ರಮಗಳ ತಡೆಯಲು ಬಳಕೆಮಾಡಿಕೊಳ್ಳಿ. ಯಾವುದೇ ಸಂದರ್ಭದಲ್ಲಿ ನಿಮಗೆ ಹೆಚ್ಚಿನ ಬಲ ಬೇಕು ಎಂದರೆ ಹತ್ತು ಹದಿನೈದು ನಿಮಿಷದಲ್ಲಿ ಪೊಲೀಸ್ ಪಡೆಯನ್ನು ನಿಮಗೆ ಕಳುಹಿಸಲಾಗುವುದು. ಚೆಕ್ ಪೋಸ್ಟ್ಗಳಲ್ಲಿ ಎಲ್ಲ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ನಡೆಸಿ. ಬೈಕ್, ಸಂದೇಹ ಬಂದರೆ ಎತ್ತಿನ ಗಾಡಿಯನ್ನು ಸರ್ಚ್ ಮಾಡಿ ಎಂದು ಸಲಹೆ ನೀಡಿದರು.
ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮಾರುಕಟ್ಟೆ ಸೇರಿದಂತೆ ಸಂದೇಹ ಚಟುವಟಿಕೆಗಳ ಮೇಲೆ ತೀವ್ರ ನಿಗಾವಹಿಸಿ, ಅಗತ್ಯಬಿದ್ದರೆ ತಪಾಸಣೆಮಾಡಿ. ಫ್ಲೈಯಿಂಗ್ ಸ್ಕ್ವಾಡ್ ವಾಹನಗಳಿಗೆ ಜಿಪಿಎಸ್ ಅಳವಡಿಕೆ ಮಾಡಲಾಗುವುದು. ಜಿಯೋ ಅಪ್ಲಿಕೇಷನ್ ಮೂಲಕ ನಿಮ್ಮ ಕಾರ್ಯ ಚಟುವಟಿಕೆಗಳ ಮೇಲೆ ನಿಗಾ ವಹಿಸಲಾಗುವುದು. ಚೆಕ್ ಪೋಸ್ಟ್ಗಳಿಗೆ ನಾಲ್ಕು ಜನ ಸಿಆರ್ಪಿಎಫ್ ಪೇದೆಗಳನ್ನು ನಿಯೋಜಿಸಲಾಗುವುದು, ಹೆಚ್ಚಿನ ಬಲ ನೀಡಲಾಗುವುದು ಎಂದರು.
ಜಿಲ್ಲಾ ಮಟ್ಟದಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ. ಟೋಲ್ ಫ್ರೀ ನಂಬರ್ ೧೯೫೦ ಸಂಖ್ಯೆಗೆ ಸಾರ್ವಜನಿಕರು ಕರೆಮಾಡಿ ಚುನಾವಣಾ ಅಕ್ರಮಗಳ ಬಗ್ಗೆ ದೂರು ನೀಡಬಹುದು. ಸಿ-ವಿಜಲ್ ಆಪ್ನಲ್ಲಿ ದೂರು ದಾಖಲಿಸಬಹುದು. ಇಲ್ಲಿ ದಾಖಲಾದ ದೂರುಗಳನ್ನು ಒಂದು ನೂರು ನಿಮಿಷದೊಳಗೆ ಇತ್ಯರ್ಥಪಡಿಸಬೇಕು. ಈ ನಿಟ್ಟಿನಲ್ಲಿ ಗಂಭೀರವಾಗಿ ಕರ್ತವ್ಯ ನಿರ್ವಹಿಸಿ ಎಂದರು.
ಚೆಕ್ ಪೊಸ್ಟ್ ಹಾದು ಹೋಗುವ ಫ್ಲಿಪ್ಕಾರ್ಟ್ ಪಾರ್ಸಲ್, ಕೋರಿಯರ್ ಪಾರ್ಸಲ್ ಸೇರಿದಂತೆ ಯಾವುದೇ ವಾಹನಗಳ ಮೇಲೆ ಸಂದೇಹ ಬಂದರೆ ತಡೆದು ನಿಲ್ಲಿಸಿ ವಾಣಿಜ್ಯ ತೆರಿಗೆ ಅಧಿಕಾರಿಗಳಿಗೆ ಮಾಹಿತಿ ರವಾನಿಸಿ ತಪಾಸಣೆ ನಡೆಸಲು ಅಗತ್ಯ ಕ್ರಮಕೈಗೊಳ್ಳಿ ಅಥವಾ ನನಗೆ ನೇರವಾಗಿ ಕರೆಮಾಡಿ ಮಾಹಿತಿ ನೀಡಿ ಎಂದು ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶಿವಕುಮಾರ ಗುಣಾರೆ ಅವರು ಮಾತನಾಡಿ, ಜಿಲ್ಲೆಯಲ್ಲಿ ೨೨ ಚೆಕ್ ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ. ಪ್ರತಿ ವಾಹನವನ್ನು ತಪಾಸಣೆ ಮಾಡಬೇಕು. ದ್ವಿ ಚಕ್ರ ವಾಹನ, ಸ್ಲೀಪರ್ ಬಸ್ಗಳು ಸೇರಿದಂತೆ ಎಲ್ಲ ಬಗೆಯ ವಾಹನಗಳನ್ನು ಚೆಕ್ ಮಾಡಬೇಕು. ನಿರ್ಲಕ್ಷ್ಯದಿಂದ ವಾಹನ ಚೆಕ್ ಮಾಡದೆ ಮುಂದೆ ಸಾಗಿ ಅಲ್ಲಿನ ಚೆಕ್ ಪೋಸ್ಟ್ನಲ್ಲಿ ತಪಾಸಣೆ ಸಂದರ್ಭದಲ್ಲಿ ಯಾವುದಾರೂ ವಸ್ತು ಮತ್ತು ಹಣ ಪತ್ತೆಯಾದರೆ ತಪಾಸಣೆಗೆ ನಿರ್ಲಕ್ಷ್ಯ ವಹಿಸಿದ ಚೆಕ್ಪೋಸ್ಟ್ಗಳ ಸಿಬ್ಬಂದಿಗಳ ಮೇಲೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ಅವರು ಮಾತನಾಡಿ, ಫ್ಲೈಯಿಂಗ್ ಸ್ಕ್ವಾಡ್ ಅರ್ಧಗಂಟೆಗಿಂತ ಹೆಚ್ಚುಕಾಲ ಒಂದೇ ಸ್ಥಳದಲ್ಲಿ ನಿಲ್ಲಬೇಡಿ. ಮುಖ್ಯ ಮಾರ್ಗಹೊರತುಪಡಿಸಿ ಇತರ ಮಾರ್ಗಗಳ ಮೇಲೆ ನಿಗಾವಹಿಸಿ. ಚೆಕ್ ಪೋಸ್ಟ್ಗಳಲ್ಲಿ ಎಲ್ಲ ವಾಹನಗಳನ್ನು ತಪಾಸಣೆಮಾಡುತ್ತಿಲ್ಲ ಎಂಬ ದೂರುಗಳಿವೆ. ಈ ಕುರಿತಂತೆ ಗಂಭೀರವಾಗಿ ಪರಿಗಣಿಸಿ ತಪಾಸಣೆ ನಡೆಸಿ ಎಂದರು.
ಆದಾಯ ತೆರಿಗೆ ಇಲಾಖೆಯ ನೋಡಲ್ ಅಧಿಕಾರಿಯಾಗಿ ನೇಮಕಗೊಂಡಿರುವ ಐ.ಆರ್.ಎಸ್. ಅಧಿಕಾರಿ ಫಕ್ಕೀರೇಶ ಅವರು ಮಾತನಾಡಿ, ರೂ.೧೦ ಲಕ್ಷ ಮೇಲ್ಪಟ್ಟ ಮೊತ್ತ ಸೀಜ್ ಮಾಡಿದರೆ ತಕ್ಷಣವೇ ಆದಾಯ ತೆರಿಗೆ ಅಧಿಕಾರಿಗಳಿಗೆ ಫೋನ್ ಕಾಲ್ ಮಾಡಿ ಮಾಹಿತಿ ನೀಡಬೇಕು. ಸೀಜ್ ಆದ ಸಮಯ ಹಾಗೂ ಮಾಹಿತಿ ನೀಡುವ ಸಮಯದಲ್ಲಿ ಹೆಚ್ಚು ಅಂತರವಿರಬಾರದು. ಐಟಿ ಅಧಿಕಾರಿಗಳ ತಂಡ ಜಿಲ್ಲೆಯಾದ್ಯಂತ ಸಂಚರಿಸಿ ನಿಗಾವಹಿಸಿದೆ ಎಂದು ತಿಳಿಸಿದರು.
ಸಭೆಯಲ್ಲಿ ಸಿ.ಐ.ಡಿ. ಕಾನೂನು ಸಲಹೆಗಾರ ಮಹೇಶ ವೈದ್ಯ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಗೋಪಾಲ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಶ್ರೀಮತಿ ಗೀತಾ ಸಿ.ಡಿ., ಚುನಾವಣಾಧಿಕಾರಿಗಳಾದ ನಾರಾಯಣರೆಡ್ಡಿ ಕನಕರೆಡ್ಡಿ, ಸೋಮಶೇಖರ ಮುಳ್ಳಳ್ಳಿ ಉಪಸ್ಥಿತರಿದ್ದರು.