ಹಾವೇರಿ: ವಿಧಾನಸಭಾ ಚುನಾವಣೆ: ಜಿಲ್ಲೆಯಲ್ಲಿ ಮೊದಲ ದಿನ ಹತ್ತು ನಾಮಪತ್ರ ಸಲ್ಲಿಕೆ
ಹಾವೇರಿ : ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೊದಲದಿನವಾದ ಏಪ್ರಿಲ್ 13 ರಂದು ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಪಕ್ಷಗಳ ಏಳು ಅಭ್ಯರ್ಥಿಗಳಿಂದ ಹತ್ತು ನಾಮಪತ್ರಗಳು ಸಲ್ಲಿಕೆಯಾಗಿವೆ.
ಹಾನಗಲ್, ಹಾವೇರಿ ಹಾಗೂ ಬ್ಯಾಡಗಿ ಕ್ಷೇತ್ರದಿಂದ ತಲಾ ಎರಡು, ಶಿಗ್ಗಾಂವ ಕ್ಷೇತ್ರದಿಂದ ಮೂರು ಹಾಗೂ ರಾಣೇಬೆನ್ನೂರು ಕ್ಷೇತ್ರದಿಂದ ಒಂದು ನಾಮಪತ್ರಗಳು ಸಲ್ಲಿಕೆಯಾಗಿದ್ದು, ಹಿರೇಕೆರೂರು ಕ್ಷೇತ್ರದಿಂದ ಮೊದಲ ದಿನ ಯಾವುದೇ ನಾಮಪತ್ರ ಸಲ್ಲಿಕೆಯಾಗಿರುವುದಿಲ್ಲ.
ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದಿಂದ ಹಾವೇರಿ ಕ್ಷೇತ್ರದಿಂದ ರುದ್ರಪ್ಪ ಮಾನಪ್ಪ ಲಮಾಣಿ ಅವರು ಎರಡು ನಾಮಪತ್ರ, ಬ್ಯಾಡಗಿ ಕ್ಷೇತ್ರದಿಂದ ಬಸವರಾಜ ಶಿವಣ್ಣನವರು ಎರಡು ನಾಮಪತ್ರ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ರಾಣೇಬೆನ್ನೂರು ಕ್ಷೇತ್ರದಿಂದ ಚನ್ನವೀರಯ್ಯ ಹೊಳಗುಂದಿಮಠ ಅವರು ಒಂದು ನಾಮಪತ್ರ, ಹಾನಗಲ್ ಕ್ಷೇತ್ರದಿಂದ ಕರ್ನಾಟಕ ಪ್ರದೇಶ ಜನಯಾದಳ (ಜಾತ್ಯಾತೀತ) ಪಕ್ಷದಿಂದ ಮನೋಹರ ತಗಶೀಲ್ದಾರ ಹಾಗೂ ಭಾರತೀಯ ಜನತಾ ಪಕ್ಷದಿಂದ ಪುಂಡಲೀಕ ಭದ್ರಾವತಿ ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ.
ಶಿಗ್ಗಾಂವ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಡಾ.ಕೆ.ಪದ್ಮರಾಜನ್, ಇಂಡಿಯನ್ ಮೂವ್ಮೆಂಟ್ ಪಾರ್ಟಿಯಿಂದ ಖಾಜಾಮೋದಿನ ಗುಡಗೇರಿ ಅವರು ಎರಡು ನಾಮಪತ್ರ ಸಲ್ಲಿಸಿದ್ದಾರೆ. ಏಪ್ರಿಲ್ 14 ರಂದು ಡಾ.ಬಿ.ಆರ್.ಅಂಬೇಡ್ಕರ ಜಯಂತಿ ಅಂಗವಾಗಿ ನಾಮಪತ್ರ ಸಲ್ಲಿಕೆ ಇರುವುದಿಲ್ಲ. ನಾಮಪತ್ರ ಸಲ್ಲಿಸಲು ಏಪ್ರಿಲ್ 20 ಕೊನೆಯ ದಿನವಾಗಿದೆ.