
ಕೇಂದ್ರವು ೨೦೨೩ರ ಮಸೂದೆ ಜಾರಿಗೊಳಿಸಿ, ಶೇ.೩೩ರಷ್ಟು ಮಹಿಳಾ ಮೀಸಲಾತಿ ಕೊಡಲಿ : ಸ್ವಾತಿ ಚಂದ್ರಶೇಖರ
ಹಾವೇರಿ: ಪ್ರಾಚೀನ ಕಾಲದ ಮಹಾಭಾರತದಿಂದ ಇಲ್ಲಿಯವರೆಗೂ ಮಹಿಳೆಯರನ್ನು ದಾಳವಾಗಿ ಬಳಸಿಕೊಂಡು ಬರುತ್ತಿರುವುದು ವಿಷಾದನೀಯ ಸಂಗತಿ. ಕೇಂದ್ರ ಸರ್ಕಾರ ವಿಧಾನಸಭೆ, ಪಾರ್ಲಿಮೆಂಟ್ಗಳಲ್ಲಿ ಶೇ.೩೩ರಷ್ಟು ಮಹಿಳಾ ಮೀಸಲಾತಿ ನೀಡಬೇಕು. ಕೇಂದ್ರ ಬಿಜೆಪಿ ಸರ್ಕಾರ ಸಾಂವಿಧಾನಿಕವಾಗಿ ದೇಶದ ಮಹಿಳೆಯರಿಗೆ ಗೌರವ ಕೊಡುವುದಾದರೆ ೨೦೨೩ರ ಮಸೂದೆಯನ್ನು ಜಾರಿಗೊಳಿಸಿ ಶೇ.೩೩ರಷ್ಟು ಮಹಿಳಾ ಮೀಸಲಾತಿ ಕೊಡಬೇಕು. ಇಲ್ಲವಾದರೆ ಬರುವ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಕೆಪಿಸಿಸಿ ವಕ್ತಾರೆ ಸ್ವಾತಿ ಚಂದ್ರಶೇಖರ ಎಚ್ಚರಿಕೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೨೩ರಲ್ಲಿ ಕಾಂಗ್ರೆಸ್ ಪಕ್ಷದ ಸಹಕಾರದೊಂದಿಗೆ ಬಿಲ್ಗೆ ಒಪ್ಪಿಗೆ ಸೂಚಿಸಲಾಗಿದೆ. ಆದರೆ ಪ್ರಸ್ತುತ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರಕ್ಕೆ ಸ್ಪಷ್ಟ ಬಹುಮತ ಇಲ್ಲ. ಆದಾಗ್ಯೂ ಪಂಚ ರಾಜ್ಯಗಳ ಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ತರಾತುರಿಯಲ್ಲಿ ಅಧಿವೇಶನ ಕರೆದು ವಿಧೇಯಕ ಜಾರಿಗೆ ತರುವ ಬಹುದೊಡ್ಡ ಹುನ್ನಾರ ನಡೆಸಿದ್ದಾರೆಂದು ಆರೋಪಿಸಿದರು.
ಈ ಬಿಜೆಪಿ ಸರ್ಕಾರಕ್ಕೆ ಪಾರ್ಲಿಮೆಂಟ್, ವಿಧಾನಸಭೆಗಳಲ್ಲಿ ಮಹಿಳೆಯರು ಕಾಣಿಸಿಕೊಳ್ಳಲು ಇಷ್ಟವಿಲ್ಲ. ಬಿಜೆಪಿ ಮಹಿಳೆಯರ ಹೆಸರಿನಲ್ಲಿ ತಮ್ಮ ರಾಜಕೀಯ ಬೇಳೆ ಬೆಯಿಸಿಕೊಳ್ಳಲು ಹೊರಟಿದ್ದಾರೆ. ಹಾಗಾಗಿಯೇ ಈ ಮಸೂದೆಯನ್ನು ಅಂಗೀಕಾರ ಮಾಡಲಿಲ್ಲ. ಹಿಂದಿ ಮಾತನಾಡುವ ರಾಜ್ಯಗಳಲ್ಲಿ ಮಾತ್ರ ಕ್ಷೇತ್ರ ಪುನರ್ ವಿಂಗಡಣೆ ಬಗ್ಗೆ ಚಿಂತಿಸಲಾಗುತ್ತಿದೆ. ಹಾಗೇನಾದರೂ ಆದರೆ ಸಂಸದರಿಗೆ ಮೌಖಿಕ ಸ್ವಾತಂತ್ರ್ಯವೇ ಇರುವುದಿಲ್ಲ. ಕ್ಷೇತ್ರ ಪುನರ್ ವಿಂಗಡಣೆ ಮಾಡಿದರೆ ಹೆಚ್ಚು ತೆರಿಗೆ ಭರಿಸುವ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗಲಿದೆ ಎಂದರು.
೧೯೮೯ ರಾಜೀವಗಾಂಧಿ ಬಿಲ್ ಮಂಡಿಸಲು ಮುಂದೆ ಬಂದಾಗ ಅಟಲ್ಜೀ, ಅಡ್ವಾಣಿ ಅವರು ಮಹಿಳೆಯರಿಗೆ ಮೀಸಲಾತಿ ನೀಡುವಷ್ಟು ನಾವು ಮುಂದುವರೆದಿಲ್ಲ ಎಂದು ವಿರೋಧಿಸಿದ್ದರು. ೨೦೧೧ರ ಜನಗಣತಿ ಆಧಾರ ಮೇಲೆ ಮಹಿಳಾ ಮೀಸಲಾತಿ ಜಾರಿಗೆ ತರಬೇಕಿತ್ತು. ಎಲ್ಲಿ ಜನಸಂಖ್ಯೆ ಹೆಚ್ಚಿರುವ ಅಲ್ಲಿ ಕ್ಷೇತ್ರ ಹೆಚ್ಚಳಕ್ಕೆ ಹುನ್ನಾರ ನಡೆಸಿದ್ದಾರೆ. ಕ್ಷೇತ್ರ ಪುನರ್ವಿಂಗಡಣೆಯಾದರೆ ದಕ್ಷಿಣ ಭಾರತದ ಸಂಸದರಿಗೆ ಬೆಲೆಯೇ ಇಲ್ಲದಂತಾಗುತ್ತದೆ. ಅವರಿಗೆ ವಿಧೇಯಕದ ಮತದಾನದಲ್ಲಿ ಬೆಲೆ ಇಲ್ಲದಂತೆ ಆಗಲಿದೆ. ಅವರ ಬೆಳೆ ಬೆಯಿಸಿಕೊಳ್ಳುತ್ತಿದ್ದಾರೆ ಎಂದರು.
ಮಹಿಳಾ ಮೀಸಲಾತಿಗೆ ವಿರೋಧ ಮಾಡಿದರೆಂದು ಕಾಂಗ್ರೆಸ್ ವಿರುದ್ಧ ಸುಳ್ಳು ಅಪಪ್ರಚಾರ ಮಾಡಬೇಡಿ. ಸ್ವಪಕ್ಷಿಯರೇ ನಿಮ್ಮ ನಿಲುವನ್ನು ವಿರೋಧ ಮಾಡುತ್ತಿದ್ದಾರೆ. ಕಾಂಗ್ರೆಸ್ ಯಾವಾಗಲೂ ದಕ್ಷಿಣ ಭಾರತ ವಿರೋಧಿ, ಸಂವಿಧಾನ ವಿರೋಧಿ ಕೆಲಸವನ್ನು ಎಂದಿಗೂ ಮಾಡಿಲ್ಲ. ಈ ಕೂಡಲೇ ಡಿ-ಲಿಮಿಟೇಶನ್ ಸರ್ಕಸ್, ದೇಶದ ಐಕ್ಯತೆಯನ್ನು ವಿಭಜಿಸುವ ಹುನ್ನಾರವನ್ನು ಬಿಟ್ಟು ಮಹಿಳಾ ಮೀಸಲಾತಿ ನೀಡಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ರಾಜ್ಯ ಕಾರ್ಯದರ್ಶಿ ಪ್ರೇಮಾ ಪಾಟೀಲ, ಹಂಗಾಮಿ ಜಿಲ್ಲಾಧ್ಯಕ್ಷೆ ಶಾಂತಕ್ಕ ಶಿರೂರ, ಗೀತಾ ಪ್ರಕಾಶ, ವಸಂತಾ ಬಾಗೂರ, ಶಂಕರ ಮೆಹರವಾಡೆ ಸೇರಿದಂತೆ ಅನೇಕರು ಇದ್ದರು.

