
ನನ್ನ ಅಂತ್ಯಕ್ರಿಯೆ ಯಾವತ್ತೋ ಅಂದೇ ಹಾನಗಲ್ನಿಂದ ನನ್ನ ಬೀಳ್ಕೊಡುಗೆ-ಟೀಕೆಗಳಿಗೆ ಶಾಸಕ ಶ್ರೀನಿವಾಸ ಮಾನೆ ತಿರುಗೇಟು
ಹಾನಗಲ್: ನನ್ನ ಪವಿತ್ರ ಕರ್ಮಭೂಮಿ ಹಾನಗಲ್. ನನ್ನ ಜೀವನದ ಕೊನೆ ಉಸಿರಿನವರೆಗೂ ಇಲ್ಲಿಂದ ನನ್ನ ಬೀಳ್ಕೊಡುಗೆ ಮಾಡಬೇಕೆನ್ನುವವರ ಆಸೆ ಈಡೇರದು. ಇಲ್ಲಿನ ಜನರ ಋಣ ತೀರಿಸಲು ನಾನು ಸದಾ ಬದ್ಧನಾಗಿದ್ದು ಆತ್ಮಸಾಕ್ಷಿಯಿಂದ ಕೆಲಸ ಮಾಡುವೆ. ನನ್ನ ಅಂತ್ಯಕ್ರಿಯೆ ಯಾವತ್ತೋ ಅಂದೇ ಹಾನಗಲ್ನಿಂದ ನನ್ನ ಬೀಳ್ಕೊಡುಗೆ ಎಂದು ಶಾಸಕ ಶ್ರೀನಿವಾಸ ಮಾನೆ ತಿರುಗೇಟು ನೀಡಿದರು.
ಮಂಗಳವಾರ ಇಲ್ಲಿನ ತಮ್ಮ ಜನಸಂಪರ್ಕ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಸಂದೀಪ ಪಾಟೀಲ ಹೆಸರು ಎಲ್ಲೂ ಉಲ್ಲೇಖಿಸದೇ ಕಾನೂನು ಪಂಡಿತರು, ಅತೀ ವಿದ್ಯಾವಂತ ಅಪ್ರಬುದ್ಧ ಎನ್ನುತ್ತಾ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ನಾನು ಬರುವ ಮೊದಲು ಇಲ್ಲಿ ಎಫ್ಐಆರ್ ರಾಜಕಾರಣ ಇತ್ತು. ಜನಸಂಖ್ಯೆಗೆ ಅನುಗುಣವಾಗಿ ಎಫ್ಐಆರ್ ದಾಖಲಾದ ಅಂಕಿ, ಅಂಶಗಳನ್ನು ಗಮನಿಸಿದರೆ ನಮ್ಮ ಹಾನಗಲ್ ಕೊನೆಯ ಸ್ಥಾನದಲ್ಲಿದೆ. ಆರೋಪ ಮಾಡುವ ಬದಲು ಪರಿಶೀಲನೆ ಮಾಡಬೇಕು ಎನ್ನುವುದನ್ನು ಅತೀ ವಿದ್ಯಾವಂತ ಅಪ್ರಬುದ್ಧ ನಕಲಿ ಹೋರಾಟಗಾರರು ಅರಿಯಬೇಕಿದೆ. ತಾಲೂಕಿನ ಜನತೆ ಅತಿವೃಷ್ಟಿ, ಕೊರೊನಾ ಸಂದರ್ಭದಲ್ಲಿ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾಗ ಸ್ಪಂದಿಸದೇ ಬೆಂಗಳೂರಿನಲ್ಲಿ ಹಾಯಾಗಿದ್ದ ನಮ್ಮೂರು ನಮ್ಮವರು ನಕಲಿ ಹೋರಾಟ ತಂಡದ ರೂವಾರಿಯೊಬ್ಬರು ಇದೀಗ ತಾಲೂಕಿಗೆ ಬಂದು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ತಮ್ಮನ್ನು ತೇಜೋವಧೆ ಮಾಡಲೆತ್ನಿಸುತ್ತಿದ್ದಾರೆ. ಪ್ರೀತಿ ಇಟ್ಟಿರುವ ಹಾನಗಲ್ ಜನರ ಋಣ ತೀರಿಸಲು ಬದ್ಧನಿದ್ದೇನೆ. ಅವರ ಬಳಿ ಬರ್ತ್ ಸರ್ಟಿಫಿಕೇಟ್ ಇರಬಹುದು, ನನ್ನ ಬಳಿ ಜನರ ಸರ್ಟಿಫಿಕೇಟ್ ಇದೆ ಎಂದರು.
ಸರ್ಕಾರಿ ಆಸ್ಪತ್ರೆಯಲ್ಲಿ ರಾತ್ರಿ ಹೊತ್ತಿನಲ್ಲಿ ಒಂದು ಹಾಡಿನ ಚಿತ್ರೀಕರಣ ಮಾಡಿರುವುದು ಸರಿಯೇ? ಯಾವ ಪುರಷಾರ್ಥಕ್ಕೆ ವಿಡಿಯೋ ಮಾಡಲಾಯಿತು. ಆಸ್ಪತ್ರೆಯ ಬೆಡ್, ಆಕ್ಸಿಜನ್, ವೈದ್ಯರ ಆಸನ ಹೀಗೆ ಎಲ್ಲವನ್ನೂ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಹಾಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ತನಿಖೆಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಚಿತ್ರೀಕರಣದ ಸಂದೇಶ ಯಾರಿಗೂ ಭಯ ಹುಟ್ಟಿಸುವ ಸಂದೇಶವಾಗುವುದು ಬೇಡ. ಜಾಗೃತಿ ಮೂಡಿಸಲಿ. ವೈದ್ಯರನ್ನು ವಿಲನ್ ಆಗಿ ಬಿಂಬಿಸಿರುವುದು ಸರಿಯೇ? ಎಂದು ಖಾರವಾಗಿ ಪ್ರಶ್ನಿಸಿದರು.
ನಮ್ಮೂರು ನಮ್ಮವರು ನಕಲಿ ಹೋರಾಟಗಾರರು ಎಷ್ಟು ಜನರ ಜೀವ ಉಳಿಸಿದ್ದಾರೆ ಎನ್ನುವುದನ್ನು ಹೇಳಲಿ. ಸರ್ಕಾರಿ ಶಾಲೆಗಳಿಗೆ, ಕಲಿಯುವ ವಿದ್ಯಾರ್ಥಿಗಳಿಗೆ ಆಸರೆಯಾಗಿದ್ದರೆ ತಿಳಿಸಲಿ. ಜನರ ಕಷ್ಟಕ್ಕೆ ಸ್ಪಂದಿಸದೇ ತಮ್ಮ ತಪ್ಪು ಮುಚ್ಚಿಕೊಳ್ಳಲು ಅನ್ಯದಾರಿ ಹಿಡಿದಿರುವ ಇವರಿಗೆ ನನ್ನ ಬಗ್ಗೆ ಮಾತನಾಡಲು ನೈತಿಕ ಹಕ್ಕಿಲ್ಲ. ತಾಲೂಕಾಸ್ಪತ್ರೆಗೆ ಸ್ವಂತ ಮತ್ತು ದಾನಿಗಳ ಹಣದಿಂದ ವೆಂಟಿಲೇಟರ್ ವ್ಯವಸ್ಥೆ ಮಾಡಿದ್ದೇವೆ. ಗುಣಮಟ್ಟದ ಚಿಕಿತ್ಸೆಗೆ ಸಾಕಷ್ಟು ಕ್ರಮ ಕೈಗೊಂಡಿದ್ದೇವೆ. ಮಧ್ಯರಾತ್ರಿಯ ಸಂದರ್ಭದಲ್ಲಿಯೂ ರೋಗಿಗಳಿಂದ ಕರೆ ಬಂದರೆ ನಮ್ಮವರು ಧಾವಿಸಿ ನೆರವಿಗೆ ನಿಲ್ಲುತ್ತಾರೆ. ಹಾವೇರಿ ಜಿಲ್ಲಾಸ್ಪತ್ರೆ, ಹುಬ್ಬಳ್ಳಿಯ ಕಿಮ್ಸ್ನಲ್ಲಿಯೂ ನಮ್ಮ ತಂಡವರು ರೋಗಿಗಳ ಕಾಳಜಿ ಮಾಡುತ್ತಿದ್ದಾರೆ. ಇವರೇನು ಮಾಡಿದ್ದಾರೆ? ಎನ್ನುವುದನ್ನು ಮೊದಲು ಹೇಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಹೊರಗಿನವನು ಎಂದು ಈಗ ಬಂದಿರುವವರು ಬಿಂಬಿಲೆತ್ನಿಸುತ್ತಿದ್ದಾರೆ. ತಮ್ಮ ಸ್ವಾರ್ಥಕ್ಕೆ ಅನಾವಶ್ಯಕ ರಾಜಕಾರಣ ಮಾಡುತ್ತಾ ಲಾಭ ಹುಡುಕುತ್ತಿದ್ದಾರೆ. ಇವರ ಧ್ವನಿ ಹತ್ತಿಕ್ಕುವುದಾಗಲಿ, ಹಾಡಿನ ವಿಡಿಯೋ ಪ್ರಸಾರ ತಡೆ ಹಿಡಿಯುವ ಕೆಲಸವಾಗಲಿ ನಾವು ಮಾಡಿಲ್ಲ. ನಾನು ಈ ಊರಿನವವೇ. ಜನ ಒಂದು ಬಾರಿಯಲ್ಲ, ಎರಡು ಬಾರಿ ತೀರ್ಮಾನ ನೀಡಿದ್ದಾರೆ. ಇನ್ನೂ ಹೆಚ್ಚು ಕೆಲಸ ಮಾಡಲು ೩ ನೇ ಬಾರಿಯೂ ಅವಕಾಶ ಕೊಡುವ ರೀತಿ ಕೆಲಸ ಮಾಡುತ್ತಿದ್ದೇನೆ. ನನ್ನ ಕೆಲಸದ ಮೇಲೆ ಜನ ವಿಶ್ವಾಸವಿಟ್ಟಾರೆ. ಅಷ್ಟು ಸಾಕು ಎಂದು ಶ್ರೀನಿವಾಸ ಮಾನೆ ಹೇಳಿದರು.
ನಾನು ಸಚಿವ ಆಗಬಾರದು ಎಂದು ಹೇಳುವ ನಮ್ಮೂರು ನಮ್ಮವರು ರೂವಾರಿ ಹೇರೂರು ಗ್ರಾಮದಲ್ಲಿ ಇತ್ತೀಚಿಗಷ್ಟೆ ನಡೆದ ಸಮಾರಂಭವೊಂದರಲ್ಲಿ ದೇವರಲ್ಲಿ ನಾನು ಸಚಿವನಾಗಲಿ ಎಂದು ಬೇಡಿಕೊಂಡಿದ್ದನ್ನು ನೆನಪಿಸುತ್ತೇನೆ. ಈಗೇಕೆ ಇಂತ ಕೆಟ್ಟ ಕನಸು ಕಟ್ಟಿದರು. ಇವರೇನು ನನ್ನ ಹೈಕಮಾಂಡ್ ಅಲ್ಲ, ಸಚಿವ ಸ್ಥಾನ ತೀರ್ಮಾನಿಸುವರೂ ಇವರಲ್ಲ. ದೇವರು ಆಶೀರ್ವದಿಸಿ ವರಿಷ್ಠರು ಗುರುತಿಸಿದರೆ ಯಾರೇ ತಿಪ್ಪರಲಾಗ ಹಾಕಿದರೂ ಸಚಿವ ಸ್ಥಾನ ತಪ್ಪಿಸಲು ಆಗುವುದಿಲ್ಲ. ಆಗದಿದ್ದರೂ ದುಃಖವಿಲ್ಲ ಎಂದು ಶಾಸಕ ಮಾನೆ ತಿರುಗೇಟು ನೀಡಿದರು.
ಹಾನಗಲ್ನ ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಸ್ಥೆಯನ್ನು ಕೆಲವೇ ಕುಟುಂಬದ ಆಸ್ತಿ ಮಾಡಿಕೊಳ್ಳಲು ಹೊರಟಿದ್ದನ್ನು ಪ್ರಜ್ಞಾವಂತರು ಪ್ರಶ್ನಿಸಿದ್ದಾರೆ. ಇಂತಹ ಕಾಳಜಿಯ ಸದಸ್ಯರನ್ನೇ ಅವರು ಹೊರ ಹಾಕಿದ್ದಾರೆ. ಮತದಾನದ ಹಕ್ಕು ಕಸಿದಿದ್ದಾರೆ. ಸದಸ್ಯತ್ವ ಕೇಳಿದವರಿಗೆ ಅವಕಾಶ ಕೊಟ್ಟಿಲ್ಲ. ಈಗ ಗೆದ್ದ ತಕ್ಷಣ ಚುನಾವಣೆ ಫಲಿತಾಂಶ ಇಡೀ ಹಾನಗಲ್ಲ ತಾಲೂಕಿಗೆ ದಿಕ್ಸೂಚಿ ಆಗುವುದಾದರೆ ಹಿಂದೆ ಹೆದರಿ ರಾಜಿನಾಮೆ ನೀಡಿದ್ದೇಕೆ. ಆಗಲೂ ನೀವೇ ಅಧಿಕಾರದಲ್ಲಿದ್ದೀರಿ ಎಂಬುದು ನೆನಪಿಲ್ಲವೆ. ನಾನು ನ್ಯಾಯದ ಪರವಾಗಿ ನಿಂತಿದ್ದೇನೆ. ಓಡಿ ಹೋಗುವವರೇನು ಈ ತಾಲೂಕಿಗೆ ದಿಕ್ಸೂಚಿಯಾಗಬಲ್ಲರು ಎಂದು ಪ್ರತಿಕ್ರಿಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಇದ್ದರು.
–

