
ಹಾವೇರಿ: ರಾಜ್ಯ ಬಂಜಾರ ಸಮಾಜದ ಏಕೈಕ ಕಾಂಗ್ರೆಸ್ ಶಾಸಕ, ವಿಧಾನಸಭೆ ಸ್ಪೀಕರ್ ರುದ್ರಪ್ಪ ಲಮಾಣಿ ಅವರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೇತೃತ್ವದ ಮಂತ್ರಿಮಂಡಲದಲ್ಲಿ ಸಚಿವ ಸ್ಥಾನ ನೀಡುವಂತೆ ವಿವಿಧ ಬಂಜಾರ ಸಮಾಜದ ಸಂಘಟನೆಗಳು, ಸಮಾಜ ಬಾಂಧವರು ಹಾಗೂ ಲಮಾಣಿ ಬೆಂಬಲಿಗರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಇಲ್ಲಿನ ಎಂ.ಎಂ. ವೃತ್ತದಿಂದ ಆರಂಭಗೊಂಡ ರುದ್ರಪ್ಪ ಲಮಾಣಿ ಅವರ ಬೆಂಬಲಿಗರು ಮೆರವಣಿಗೆ ಮೂಲಕ ಹೊಸಮನಿ ಸಿದ್ದಪ್ಪ ವೃತ್ತ, ಪಿ.ಬಿ ರಸ್ತೆ, ಪ್ರವಾಸಿಮಂದಿರ, ಕಿತ್ತೂರ ರಾಣಿ ಚೆನ್ನಮ್ಮ ವೃತ್ತ, ಗುರುಭವನ ಮಾರ್ಗವಾಗಿ ಸಂಚರಿಸಿ ಜೆ.ಹೆಚ್ ಪಟೇಲ್ ವೃತ್ತವನ್ನು ತಲುಪಿದರು. ನಗರದ ಹುತಾತ್ಮ ಮೈಲಾರ ಮಹದೇವಪ್ಪ ವೃತ್ತದಲ್ಲಿ ಜಮಾವಣೆಗೊಂಡಿದ್ದ ಬಂಜಾರ ಸಮಾಜದ ಮುಖಂಡರು, ಪದಾಧಿಕಾರಿಗಳು, ಶಾಸಕರ ಅಭಿಮಾನಿಗಳು ನಗರದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದರು. ರುದ್ರಪ್ಪ ಲಮಾಣಿ ಪರ ಭಾವಚಿತ್ರ ಹಿಡಿದು ಸಚಿವ ಸ್ಥಾನ ನೀಡುವಂತೆ ಕಾಂಗ್ರೆಸ್ನ ಹೈಕಮಾಂಡ ನಾಯಕರಿಗೆ ಒಕ್ಕೋರಲಿನ ಹಕ್ಕೋತ್ತಾಯ ಮಾಡಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಕರ್ನಾಟಕ ಬಂಜಾರ ಸಂತ ಸೇವಾಲಾಲ್ ಸಂಘದ ಜಿಲ್ಲಾಧ್ಯಕ್ಷ ವಿಷ್ಣುಕುಮಾರ ನಾಯ್ಕ ಮಾತನಾಡಿ, ರಾಜ್ಯದಲ್ಲಿ ಏಕೈಕ ಬಂಜಾರ ಸಮುದಾಯದ ಕಾಂಗ್ರೆಸ್ ನಾಯಕ ರುದ್ರಪ್ಪ ಲಮಾಣಿ ಅವರು ಬ್ಯಾಡಗಿ ಹಾಗೂ ಹಾವೇರಿಯಲ್ಲಿ ಮೂರು ಭಾರಿ ಶಾಸಕರಾಗಿ ಆಯ್ಕೆಯಾದ್ದಾರೆ. ೨೦೧೮ರ ಕಾಂಗ್ರೆಸ್ ಅವಧಿಯಲ್ಲಿ ಮುಜರಾಯಿ ಖಾತೆ ಸಚಿವರಾಗಿಯೂ ಸೇವೆ ಮಾಡಿದ್ದಾರೆ. ೨೦೨೩ರ ಚುನಾವಣೆಯಲ್ಲಿ ಗೆದ್ದಿರುವ ಅವರಿಗೆ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಕೈತಪ್ಪಿತ್ತು. ಹಾಗಾಗಿ ವಿಧಾನಸಭೆ ಉಪ ಸಭಾಧ್ಯಕ್ಷರನ್ನಾಗಿ ನೇಮಿಸಿದ್ದ ಸರಕಾರ, ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಅಕಾರ ನಿರ್ವಹಿಸಿದ್ದಾರೆ. ಇದೀಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ನೂತನ ಮಂತ್ರಿಮಂಡಲ ರಚನೆಯಾಗಿದ್ದು, ಈ ಅವಯಲ್ಲಿ ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ನೀಡಲೇ ಬೇಕು ಎಂದು ಆಗ್ರಹಿಸಿದರು.
ಸಮಾಜದ ಮುಖಂಡ ಸುಧೀರ್ ಲಮಾಣಿ ಮಾತನಾಡಿ, ೨೦೨೩ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ಬಂಜಾರ ಜನಾಂಗಕ್ಕೆ ಸಚಿವ ಸ್ಥಾನವನ್ನು ಕೋಡುತ್ತೇವೆ ಎಂದು ನಂಬಿಸಿದ್ದರು, ಬಳಿಕ ಅನಿವಾರ್ಯ ಕಾರಣಗಳಿಂದ ಸಚಿವ ಸ್ಥಾನ ಕೊಡಲಿಲ್ಲ. ಇದರಿಂದ ಸಮಸ್ತ ಬಂಜಾರ ಸಮಾಜಕ್ಕೆ ಅನ್ಯಾಯವಾಗಿದೆ. ಕಳೆದ ವರ್ಷ ನಡೆದ ಶಿಗ್ಗಾವಿ ಉಪ ಚುನಾವಣೆ, ದಾವಣಗೇರೆ, ಬಾಗಲಕೋಟೆಯಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಂಜಾರ ಸಮಾಜದಿಂದ ಹೆಚ್ಚಿನ ಮತಗಳನ್ನು ಹಾಕಿಸಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದೇವೆ. ಈ ಹಿನ್ನೆಲೆ ಎರಡನೇ ಹಂತದಲ್ಲಿಯಾದರೂ ಕಾಂಗ್ರೆಸ್ ಹೈಕಮಾಂಡ ನಾಯಕರು ಬಂಜಾರ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಿ, ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ಕೊಡಬೇಕೆಂದು ಒತ್ತಾಯಿಸಿದರು.
ಬಳಿಕ ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್.ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದರು. ಈ ವೇಳೆ ಆಲ್ ಇಂಡಿಯಾ ಬಂಜಾರ ಸಮಾಜದ ಜಿಲ್ಲಾಧ್ಯಕ್ಷ ಐ.ಡಿ.ಲಮಾಣಿ, ಕರ್ನಾಟಕ ಸಂತ ಬಂಜಾರ ಸೇವಾಲಾಲ್ ಸಂಘದ ರಾಜ್ಯಾಧ್ಯಕ್ಷ ಜಯರಾಮ್ ಮಾಳಾಪುರ, ಮುತ್ತಪ್ಪ ಕೊರವರ, ತುಕ್ಕಪ್ಪ ಯಲ್ಲಾಪುರ, ನಿಂಗರಾಜ ನಾಯ್ಕ, ಸಂತೋಷ ಲಮಾಣಿ, ಪರಮೇಶ ಲಮಾಣಿ, ಜಯಪ್ಪ ಲಮಾಣಿ, ಸುಭಾಷ ಲಮಾಣಿ, ರವಿ ಲಮಾಣಿ, ಪಕ್ಷದ ಕಾರ್ಯಕರ್ತರಾದ ಮಲ್ಲೇಶಪ್ಪ ಬಂಕಾಪುರ, ಶಂಕರ ಬಾಲಕ್ಕನವರ, ಗೀತಾ ಪ್ರಕಾಶ ಸೇರಿದಂತೆ ಬಂಜಾರ ಸಮಾಜದ ಅನೇಕರು, ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.

