ಹಾವೇಮುಲ್ನ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗಿಂದು ಚುನಾವಣೆ
ಕಾಂಗ್ರೆಸ್ನಲ್ಲಿ ಮೂಡದ ಒಮ್ಮತ-ತ್ರಿವಳಿ ಪಾಟೀಲರ ನಡುವೆ ಪೈಪೋಟಿ!
ಹಾವೇರಿ; ಧಾರವಾಡ ಹಾಲು ಒಕ್ಕೂಟದಿಂದ ಪ್ರತ್ಯೇಕಗೊಂಡ ಅಸ್ತಿತ್ವಕ್ಕೆ ಬಂದಿರುವ ಹಾವೇರಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ೫ವರ್ಷದ ಅವಧಿಗೆ (ಹಾವೇಮುಲ್) ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಗಳಿಗಿಂದು ಒಕ್ಕೂಟದ ಸಭಾಭವನದಲ್ಲಿ ಚುನಾವಣೆ ನಡೆಯಲಿದೆ.
ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗಾಗಿ ಮಾ. ೧೫ರಂದು ಹುಬ್ಬಳ್ಳಿಯ ಖಾಸಗಿ ಹೋಟೆಲ್ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರ ನೇತೃತ್ವದಲ್ಲಿ ಜಿಲ್ಲೆಯ ಶಾಸಕರು ಹಾಗೂ ಹಾಲು ಒಕ್ಕೂಟದ ೭ ನಿರ್ದೇಶಕರ ಸೇರಿದ್ದ ಸಭೆಗೆ ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ಶಿವಣ್ಣನವರ ಗೈರಾದ ಹಿನ್ನಲೆಯಲ್ಲಿ ಸಭೆಯಲ್ಲಿ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಯಾವುದೇ ನಿರ್ಣಯ ಕೈಗೊಳ್ಳದೇ ಅಪೂರ್ಣಗೊಂಡಿದೆ.
ಶಿವಣ್ಣನವರ, ಲಾಮಾಣಿ ಗೈರು: ಮಾ.೧೫ರಂದು ಹುಬ್ಬಳ್ಳಿಯಲ್ಲಿ ನಡೆದ ಸಭೆಗೆ ಶಾಸಕರುಗಳಾದ ಯು.ಬಿ.ಬಣಕಾರ, ಪ್ರಕಾಶ ಕೋಳಿವಾಡ, ಶ್ರೀನಿವಾಸ ಮಾನೆ, ಯಾಸೀರ್ಖಾನ್ ಪಠಾಣ ಹಾಗೂ ನಿರ್ದೇಶಕರುಗಳಾದ ಬಸವೇಶಗೌಡ ಪಾಟೀಲ, ಮಂಜನಗೌಡ ಪಾಟೀಲ, ಉಜ್ಜನಗೌಡ ಮಾವಿನತೋಪ, ಅಶೋಕ ಪಾಟೀಲ, ಚಂದ್ರಪ್ಪ ಜಾಲಗಾರ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿರುವ ಪ್ರಕಾಶ ಬನ್ನಿಹಟ್ಟಿ, ನೂತನವಾಗಿ ಸರ್ಕಾರದಿಂದ ನೇಮಕಗೊಂಡಿರುವ ಶಂಕರಗೌಡ ಪಾಟೀಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮತ್ತಿತರರು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರ ನೇತೃತ್ವದಲ್ಲಿ ಸಭೆ ಸೇರಿದ್ದರು.
ಒಕ್ಕೂಟಕ್ಕೆ ನಾಮ ನಿರ್ದೇಶನಕ್ಕೆ ಸಂಬಂಧಿಸಿದಂತೆ ಅಸಮಧಾನ ಗೊಂಡ ಕಾರಣಕ್ಕೆ ಸಭೆಗೆ ಶಾಸಕ ಬಸವರಾಜ ಶಿವಣ್ಣನವರ ಗೈರಾಗಿದ್ದರೆನ್ನಲಾಗಿದ್ದು, ಹಾವೇರಿ ಶಾಸಕ ರುದ್ರಪ್ಪ ಲಮಾಣಿಗೆ ಅಪಘಾತವಾಗಿರುವ ಹಿನ್ನಲೆಯಲ್ಲಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನಲೆಯಲ್ಲಿ ಅವರು ಹಾಜರಾಗಿರಲಿಲ್ಲ. ಈ ಕಾರಣಗಳಿಗಾಗಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಉಸ್ತುವಾರಿ ಸಚಿವರು ಯಾವದೇ ನಿರ್ಣಯ ಕೈಗೊಳ್ಳದೇ ಮಾ.೧೭ರಂದು ಬೆಳಿಗ್ಗೆ ೯-೩೦ಕ್ಕೆ ಹಾವೇರಿ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಅಂತಿಮ ಹೆಸರುಗಳನ್ನು ಘೋಷಿಸುವುಗಿ, ಎಲ್ಲ ನಿರ್ದೇಶಕರು, ಶಾಸಕರು ಒಗ್ಗಟ್ಟಾಗಿ ಇರುವಂತೆ ಸೂಚಿಸಿದರೆಂದು ಮೂಲಗಳು ತಿಳಿಸಿವೆ.
ಅಧ್ಯಕ್ಷರ ರೇಸಿನಲ್ಲಿ ತ್ರಿವಳಿ ಪಾಟೀಲತ್ರಯರ ಪೈಪೋಟಿ: ಹಾವೇರಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಅಶೋಕ ಪಾಟೀಲ, ಮಂಜನಗೌಡ ಪಾಟೀಲ, ಬಸವೇಶಗೌಡ ಪಾಟೀಲ ಅವರುಗಳು ಪೈಪೋಟಿ ನಡೆಸಿದ್ದಾರೆ. ಈ ಮೂವರಲ್ಲಿ ಅಧ್ಯಕ್ಷರು ಯಾರು? ಎನ್ನುವುದು ಮಾ.೧೭ ರಂದು ಬೆಳಿಗ್ಗೆ-೯-೩೦ಕ್ಕೆ ನಡೆಯುವ ಸಭೆಯಲ್ಲಿ ಉಸ್ತುವಾರಿ ಸಚಿವರು ಪ್ರಕಟಿಸಲಿದ್ದಾರೆ. ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿರುವ ಪ್ರಕಾಶ ಬನ್ನಿಹಟ್ಟಿ ಸೇರಿದಂತೆ ಹಲವರು ಹೆಸರುಗಳು ಕೇಳಿಬರುತ್ತಿವೆ.
೫೦-೫೦ ಮಾದರಿಯಲ್ಲಿ ಅಧಿಕಾರ ಹಂಚಿಕೆ: ಹಾವೇಮುಲ್ ೫ ವರ್ಷದ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ಇಂದು ನಡೆಯಲಿದೆ. ಕಾಂಗ್ರೆಸ್ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಇರುವ ಕಾರಣಕ್ಕೆ ಕಾಂಗ್ರೆಸ್ನ ವರಿಷ್ಠರು ೫ ವರ್ಷದ ಅವಧಿಯನ್ನು ಎರಡುವರೆ ವರ್ಷ ಎಂದು ನಿಗದಿ ಪಡಿಸಿ ೫೦-೫೦ ಮಾದರಿಯಲ್ಲಿ ಅಧಿಕಾರ ಹಂಚಿಕೆಯ ಸೂತ್ರಕ್ಕೆ ಮುಂದಾಗಿದ್ದಾರೆಂದು ತಿಳಿದು ಬಂದಿದೆ. ಮೊದಲ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳು ಯಾರ ಹೆಗಲೇರಲಿವೆ ಎನ್ನುವುದು ಇಂದು ನಡೆಯುವ ಚುನಾವಣೆಯಲ್ಲಿ ಅಂತಿಮಗೊಳ್ಳಲಿದೆ.
ಹಾವೇಮುಲ್ನಲ್ಲಿ ಬಲಾ ಬಲ
ಒಟ್ಟು ನಿರ್ದೇಶಕ ಸ್ಥಾನಗಳು -೮=೧-೯
ಕಾಂಗ್ರೆಸ್ ನಿರ್ದೇಶಕರು -೫+೧+೧-೭
ಬಿಜೆಪಿ ನಿರ್ದೇಶಕರು -೨
ಚುನಾವಣಾ ಪ್ರಕ್ರಿಯೆ
ಒಕ್ಕೂಟದ ಸಭಾಭವನದಲ್ಲಿ ಮಾ.೧೭ರಂದು ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸುವ ವೇಳೆ ಬೆಳಗ್ಗೆ ೧೦.೦೦ ರಿಂದ ಮಧ್ಯಾಹ್ನ ೧೨.೦೦,ಆಡಳಿತ ಮಂಡಳಿಯ ಸಭೆ-ನಾಮಪತ್ರಗಳ ಪರಿಶೀಲನೆ ಮಧ್ಯಾಹ್ನ ೧೨.೦೦, ಕ್ರಮಬದ್ಧವಾದ ಅಭ್ಯರ್ಥಿಗಳ ನಾಮಪತ್ರಗಳು ಹಾಗೂ ತಿರಸ್ಕೃತ ಅಭ್ಯರ್ಥಿಗಳ ನಾಮಪತ್ರಗಳ
ಪಟ್ಟಿ ಪ್ರಕಟಣೆ ನಾಮಪತ್ರಗಳ ಪರಿಶೀಲನೆ ನಂತರ, ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳ ನಾಮಪತ್ರಗಳನ್ನು ಹಿಂತೆಗೆದುಕೊಳ್ಳುವುದು, ಕ್ರಮಬದ್ಧ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆ ನಂತರ. ೩೦ ನಿಮಿಷಗಳ ಕಾಲ ನಾಮಪತ್ರಗಳ ವಾಪಸ್ಸು ಪಡೆದ ಅಭ್ಯರ್ಥಿಗಳ ಹೆಸರು ಹಾಗೂ ಸ್ಪರ್ಧಾಕಣದಲ್ಲಿರುವ ಅಭ್ಯರ್ಥಿಗಳ ಹೆಸರು ಪ್ರಕಟ.
ನಾಮಪತ್ರಗಳ ವಾಪಸ್ಸು ಪಡೆಯಲು ನೀಡಿದ ಅವಧಿಯ ನಂತರ ಅವಶ್ಯವಿದ್ದಲ್ಲಿ ಮಧ್ಯಾಹ್ನ ೧ಕ್ಕೆ ಮತದಾನ, ಮತ ಏಣಿಕೆ ಹಾಗೂ ಫಲಿತಾಂಶ ಘೋಷಣೆ ಮಾಡಲಾಗುವುದು ಎಂದು ಹಾವೇರಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಚುನಾವಣಾಧಿಕಾರಿ ಹಾವೇರಿ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕರು ತಿಳಿಸಿದ್ದಾರೆ.