
ಕೃಷಿ ಪಂಪ್ ಸೆಟ್ಗಳಿಗೆ ೭ ತಾಸು ವಿದ್ಯುತ್ ಪೂರೈಕೆಗೆ ರೈತರ ಆಗ್ರಹ
ಹಾವೇರಿ: ರೈತರ ಪಂಪ್ಸೆಟ್ಗಳಿಗೆ ಸೋಲಾರ್ ಅಳವಡಿಸುವ ಯೋಜನೆಯಿಂದಾಗಿ ರೈತರಿಗೆ ಬಹಳಷ್ಟು ಅನಾನುಕೂಲ ಆಗುತ್ತಿದ್ದು, ತಕ್ಷಣದಿಂದಲೇ ಅಕ್ರಮ -ಸಕ್ರಮ ಯೋಜನೆಯನ್ನು ಮರು ಜಾರಿ ಮಾಡಬೇಕು, ಕೃಷಿ ಪಂಪ್ ಸೆಟ್ಗಳಿಗೆ ೭ ತಾಸು ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರಿಗೆ ಹಾವೇರಿ ಜಿಲ್ಲಾ ರೈತ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿ ಒತ್ತಾಯಿಸಿದರು.
ಜಿಲ್ಲೆಯಲ್ಲಿ ಕೃಷಿ ಪಂಪ್ ಸೆಟ್ ಗಳ ಟಿಸಿ ಗಳು ಬಹಳಷ್ಟು ಓವರ್ ಲೋಡ್ ಆಗಿದ್ದು ತಕ್ಷಣ ಓವರ್ ಲೋಡ್ ಆದ ಟಿಸಿ ಗಳನ್ನು ಅಪ್ ಗ್ರೇಡ್ ಮಾಡಬೇಕು. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದೆ ಬೆಳೆಗಳು ಒಣಗುತ್ತಿವೆ. ಕೃಷಿ ಪಂಪ್ಸೆಟ್ಗಳಿಗೆ ನಿಗದಿತ ಏಳು ಗಂಟೆಗಳ ಬದಲಿಗೆ ಕೇವಲ ೩-೪ ಗಂಟೆ ಮಾತ್ರ ವಿದ್ಯುತ್ ಸಿಗುತ್ತಿದ್ದು ತಕ್ಷಣದಿಂದಲೇ ಕೃಷಿ ಪಂಪ್ ಸೆಟ್ ಗಳಿಗೆ ೭ ತಾಸು ವಿದ್ಯುತ್ ಪೂರೈಕೆ ಮಾಡಬೇಕು.
ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ವಿದ್ಯುತ್ ಕಂಬಗಳು ಮತ್ತು ತಂತಿಗಳು ದಶಕಗಳಷ್ಟು ಹಳೆಯದಾಗಿದ್ದು, ಅಪಾಯಕಾರಿ ಸ್ಥಿತಿಯಲ್ಲಿವೆ ತಕ್ಷಣ ಹಳೆಯ ಕಂಬ ಮತ್ತು ತಂತಿಗಳನ್ನು ಬದಲಾಯಿಸಿ ಹೊಸ ಕಂಬ ಮತ್ತು ತಂತಿಗಳನ್ನು ಅಳವಡಿಸಬೇಕು. ಸುಟ್ಟ ಟ್ರಾನ್ಸ್ಫಾರ್ಮರ್ಗಳನ್ನು ೨೪ ಗಂಟೆಯೊಳಗೆ ಬದಲಾಯಿಸಬೇಕು ಈ ಪ್ರಕ್ರಿಯೆಯನ್ನು ಹೆಸ್ಕಾಂ ಇಲಾಖೆ ಅಧಿಕಾರಿಗಳು ಮಾಡುತ್ತಿಲ್ಲ ತಕ್ಷಣ ಸುಟ್ಟ ಟ್ರಾನ್ಸ್ಫಾರ್ಮರ್ಗಳನ್ನು ೨೪ ಗಂಟೆಯೊಳಗೆ ಬದಲಾವಣೆ ಮಾಡಬೇಕು.
ವಿದ್ಯುತ್ ವ್ಯತ್ಯಯದ ಜೊತೆಗೆ ಕಡಿಮೆ ವೋಲ್ಟೇಜ್ ಇರುವುದರಿಂದ ಪಂಪ್ಸೆಟ್ಗಳ ಮೋಟಾರ್ಗಳು ಸುಟ್ಟು ಹೋಗುತ್ತಿದ್ದು, ರೈತರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ ತಕ್ಷಣ ಕಡಿಮೆ ವೋಲ್ಟೇಜ್ ಸಮಸ್ಯೆ ಬಗೆಹರಿಸಬೇಕು, ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆ ಅಡಿ ಮೂರು ತಿಂಗಳ ಹಿಂದೆ ಖರೀದಿ ಮಾಡಿದ ಗೋವಿನ ಜೋಳದ ಹಣ ಇನ್ನೂ ಜಮಾ ಮಾಡಿಲ್ಲ ಕಾರಣ ಗೋವಿನ ಜೋಳ ಖರೀದಿ ಮಾಡಿದ ಹಣ ಮತ್ತು ಅದಕ್ಕೆ ಮೂರು ತಿಂಗಳ ಬಡ್ಡಿ ಸೇರಿಸಿ ರೈತರ ಖಾತೆಗೆ ಜಮಾ ಮಾಡಬೇಕೆಂದು ಜಿಲ್ಲಾ ರೈತ ಸಂಘ ಒತ್ತಾಯಿಸಿದೆ.
ಸನ್ ೨೦೨೫-೨೬ ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ಪರಿಹಾರ ಇನ್ನು ಜಮಾ ಆಗಿಲ್ಲ ತಕ್ಷಣ ಬೆಳೆ ವಿಮೆ ಪರಿಹಾರ ಜಮಾ ಮಾಡಬೇಕು. ಜಿಲ್ಲೆಯಲ್ಲಿ ಇನ್ನೂ ಎರಡು ತಿಂಗಳು ಕಳೆದರೆ ಬಿತ್ತನೆ ಕಾರ್ಯ ಪ್ರಾರಂಭವಾಗಲಿದ್ದು ರಸಗೊಬ್ಬರದ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು.ಮುಂದಿನ ಪ್ರಗತಿ ಪರಿಶೀಲನಾ ಸಭೆಯ ವೇಳೆಗೆ ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ಹಾವೇರಿ ವತಿಯಿಂದ ಉಗ್ರ ಹೋರಾಟ ಮಾಡಲಾಗುವುದೆಂದು ರೈತ ಸಂಘದ ಪದಾಧಿಕಾರಿಗಳು ಉಸ್ತುವಾರಿ ಸಚಿವರಿಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರಾಮಣ್ಣ ಕೆಂಚಳ್ಳೇರ, ಮಲ್ಲಿಕಾರ್ಜುನ ಬಳ್ಳಾರಿ, ಮಾಲತೇಶ ಪೂಜಾರ, ಹೆಚ್.ಹೆಚ್. ಮುಲ್ಲಾ, ಶಿವಬಸಪ್ಪ ಗೋವಿ, ಶಿವಯೋಗಿ ಹೊಸಗೌಡ್ರ, ಮರಿಗೌಡ ಪಾಟೀಲ, ರುದ್ರಗೌಡ ಕಾಡನಗೌಡ್ರ, ಪ್ರಭುಗೌಡ ಪ್ಯಾಟಿ, ರಾಜು ತರ್ಲಗಟ್ಟ, ಶಂಕ್ರಣ್ಣ ಶಿರಗಂಬಿ, ಚೆನ್ನಪ್ಪ ಮರಡೂರ, ಗುಡ್ಡನಗೌಡ ಪ್ಯಾಟಿಗೌಡ್ರ, ಎ.ಆರ್. ಮಣಕೂರ, ಮಲ್ಲನಗೌಡ ಮಾಳಗಿ, ಜಗದೀಶ ಮೂಲಿಮನಿ, ಸುಭಾಷ ಬೆಣ್ಣಿಹಟ್ಟಿ, ಮುಂತಾದವರು ಹಾಜರಿದ್ದರು.

