
ಹೆರಿಗೆ ನಂತರ ಸರಿಯಾಗಿ ಸ್ಟೀಚ್ ಹಾಕದೇ ಬೇಜವಾಬ್ದಾರಿ-ಹಾವೇರಿಜಿಲ್ಲಾ ಆಸ್ಪತ್ರೆಯ ವೈದ್ಯನ ವಿರುದ್ಧ ದೂರು ದಾಖಲು
ಹಾವೇರಿ: ಗರ್ಭಿಣಿ ಮಹಿಳೆಯ ಸಿಜರಿನ್ ಮಾಡಿ ಹೆರಿಗೆಯಾದ ನಂತರ ಸರಿಯಾದ ರೀತಿಯಲ್ಲಿ ಹೊಲಿಗೆಯನ್ನು ಹಾಕಿದೇ ನಂಜು ಬರಲು ಕಾರಣವೆಂದು ಹಾವೇರಿ ಜಿಲ್ಲಾ ಆಸ್ಪತ್ರೆಯ ವೈದ್ಯ ಡಾ. ಪ್ರದೀಪ ಬಿ ಅವರ ಮೇಲೆ ಕರ್ತವ್ಯ ಲೋಪ, ಬೇಜವಾಬ್ದಾರಿ ವರ್ತನೆಯ ಆರೋಪಮಾಡಿರುವ ಮಹಿಳೆಯ ಪತಿ ಹಾವೇರಿ ಶಹರ ಠಾಣೆಯಲ್ಲಿ ಶುಕ್ರವಾರ ದೂರು ದಾಖಲು ಮಾಡಿದ್ದಾರೆ.
ಪ್ರಕರಣ ಹಿನ್ನಲೆ: ಹಾವೇರಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ವಿಭಾಗದಲ್ಲಿ ಹಾನಗಲ್ಲ ತಾಲೂಕಿನ ಹಸನಾಬಾದಿ ಗ್ರಾಮದ ಗರ್ಭಿಣಿ ಮಹಿಳೆ ಸುಧಾ ರಾಘವೇಂದ್ರ ಹನುಮನಹಳ್ಳಿ ಹೆರಿಗೆಗಾಗಿ ಮೇ. ೨೨ ರಂದು ದಾಖಲಾಗಿದ್ದರು. ಮರು ದಿನ ಇವರ ಹೆರಿಗೆಯನ್ನು ಜಿಲ್ಲಾ ಆಸ್ಪತ್ರೆಯ ಡಾ. ಪ್ರವೀಣ.ಬಿ ಅವರು ಚಿಕಿತ್ಸೆ ನೀಡಿ ಸಿಜರಿನ್ ಮಾಡಿ ಹೆರಿಗೆ ಮಾಡಿಸಿದ್ದರು. ಹೆರಿಗೆ ನಂತರ ಹೊಟ್ಟೆಗೆ ಸರಿಯಾಗಿ ಸ್ಟೀಚ್ ಹಾಕದೇ ಬೇಜವಾಬ್ದಾರಿ ಮಾಡಿದ ಕಾರಣದಿಂದ ಬಾಣಂತಿ ಹೊಟ್ಟೆಗೆ ಗಾಯ ನಂಜಾಗಿ ಕೀವು ತುಂಬಿ ಮಹಿಳೆ ನರಳಾಡಿದ್ದಾಳೆ.
ಆಸ್ಪತ್ರೆಯಿಂದ ಮನೆಗೆ ಹೋದವರು ಮತ್ತೆ ಅದೇ ವೈದ್ಯರ ಬಳಿ ಬಂದು ವಿಚಾರಿಸಿದಾಗ. ನಮ್ಮಲ್ಲಿ ಇವರಿಗೆ ಚಿಕಿತ್ಸೆ ನೀಡಲು ಆಗಲ್ಲ. ಹುಬ್ಬಳ್ಳಿ ಕೆಎಂಸಿಗೆ ಕರೆದುಕೊಂಡು ಹೋಗಿ ಎಂದು ಕುಟುಂಬದವರಿಗೆ ಹೇಳಿ ಕೈತೊಳಿದುಕೊಂಡಿದ್ದರು. ಪ್ರಾಣ ಉಳಿಸಿಕೊಳ್ಳಲು ಸುಧಾಳನ್ನು ತಕ್ಷಣವೇ ಜೂ.೨ ರಂದು ಶಿರಸಿ ವಾತ್ಸಲ್ಯ ಖಾಸಗಿ ಆಸ್ಪತ್ರೆ ಕರೆದುಕೊಂಡು ಹೋಗಿ ತುರ್ತು ಚಿಕಿತ್ಸೆ ಕೊಡಿಸಿದ್ದಾರೆ, ತಾಯಿ ಮತ್ತು ಮಗುವಿನ ಆರೋಗ್ಯ ಚೇತರಿಕೆಯಾಗಿದೆ.
ಹಾವೇರಿ ಜಿಲ್ಲಾ ಆಸ್ಪತ್ರೆ ವೈದ್ಯ ಡಾ. ಪ್ರದೀಪ ಬಿ ಅವರು ಕರ್ತವ್ಯ ಲೋಪ, ಬೇಜವಾಬ್ದಾರಿಯಿಂದ ಬಡಪಾಯಿ ಸುಧಾ ಕುಟುಂಬ ಲಕ್ಷಾಂತರ ಹಣವನ್ನು ಖಾಸಗಿ ಆಸ್ಪತ್ರೆಗೆ ಕಟ್ಟಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಲ್ಲದೇ ಪದೇ,ಪದೆ ಆಪರೇಷನ್ ನಿಂದ ಮಹಿಳೆ ಸಾಕಷ್ಟು ತೊಂದರೆಯನ್ನು ಅನುಭವಿಸುವಂತಾಗಿದೆ ಎಂದು ಆರೋಪಿಸಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಡಾ.ಪ್ರದೀಪ ಮೇಲೆ ಮಹಿಳೆಯ ಪತಿ ರಾಘವೇಂದ್ರ ಹನುಮನಹಳ್ಳಿ ಹಾವೇರಿ ಶಹರ ಪೊಲೀಸ್ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಹಾವೇರಿ ಜಿಲ್ಲಾ ಆಸ್ಪತ್ರೆಯ ವೈದ್ಯರು ಸರಿಯಾದ ಚಿಕಿತ್ಸೆ ನೀಡುವುದಿಲ್ಲ. ಇಲ್ಲಿ ಹಣ ಕೊಟ್ಟರೆ ಒಂದು ತರಾ ನೋಡುತ್ತಾರೆ, ಹಣ ಬಿಚ್ಚದೇ ಹೋದರೆ ಪ್ರಾಣಕ್ಕೆ ಕುತ್ತು ತರುತ್ತಾರೆ. ಜೀವ ಉಳಿಸುವ ಮುಖವಾಡದಲ್ಲಿ ಹಣ ಮಾಡುವ ದಂಧೆಯಲ್ಲಿ ಮುಳಗಿ ಹೋಗಿದ್ದಾರೆ. ತಪಿತಸ್ಥ ವೈದ್ಯರ ಮೇಲೆ ಕಠಿಣ ಕ್ರಮ ಆಗಬೇಕು. ಪ್ರತಿ ನಿತ್ಯ ಸಾವಿರಾರು ರೋಗಿಗಳು ಸರಕಾರಿ ಆಸ್ಪತ್ರೆ ನಂಬಿ ಬಂದವರಿಗೆ ಉತ್ತಮ ಚಿಕಿತ್ಸೆ ಸಿಗಬೇಕು. ಕ್ರಮ ಜರುಗಿಸದೇ ಹೋದರೆ ಇಂತಹ ಎಡವಟ್ಟು ಹೆಚ್ಚಾಗುತ್ತಲೇ ಹೋಗುತ್ತವೆ. ತಕ್ಷಣವೇ ಸರ್ಕಾರ, ಜಿಲ್ಲಾಡಳಿತ ವಿಚಾರಣೆ ನಡೆಸಿ ಆಸ್ಪತ್ರೆ ಅವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ನೊಂದ ಮಹಿಳೆಯ ಪತಿ ರಾಘವೇಂದ್ರ ಆಗ್ರಹ ಮಾಡಿದ್ದಾರೆ.

