
–ಅಂಗನವಾಡಿ ಕೇಂದ್ರದಲ್ಲಿ ಅಕ್ಕನನ್ನೇ ಭೀಕರವಾಗಿ ಕೊಚ್ಚಿ ಕೊಲೆಮಾಡಿದ ತಮ್ಮ
ಹಾವೇರಿ: ಒಡಹುಟ್ಟಿದ ಅಕ್ಕನನ್ನೇ ತಮ್ಮನೋರ್ವ ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಶಿಗ್ಗಾಂವ್ ಪಟ್ಟಣದ ಗುಡ್ಡದ ಓಣಿಯ ಅಂಗನವಾಡಿ ಕೇಂದ್ರದಲ್ಲಿ ಸೋಮವಾರ . ಬೆಳಗ್ಗೆ ಸುಮಾರು ೯.೩೦ಕ್ಕೆ ನಡೆದಿದೆ. ಕೊಲೆಯಾದ ಮಹಿಳೆಯನ್ನು ಹುಬ್ಬಳ್ಳಿ ತಾಲೂಕು ತಾರೀಹಾಳ ಗ್ರಾಮದ ಸುಮಾ ಶಿವಶಂಕರಪ್ಪ ಸವಣೂರು (೨೩) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ. ಸುಮಾಳ ತಮ್ಮ ಸಂಜಯ ಶಿಗ್ಗಾಂವಿ ಪೊಲೀಸರು ತಿಳಿಸಿದ್ದಾರೆ.
ಸುಮಾ ಅವರನ್ನು ಕೆಲವು ವರ್ಷಗಳ ಹಿಂದೆ ಶಿಗ್ಗಾಂವ್ ಪಟ್ಟಣದ ಶಿವಶಂಕರ್ ಜೊತೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಪತಿ ಜತೆ ವಾಸವಿರದೆ ಸುಮಾ ಅಂತರ ಕಾಯ್ದುಕೊಂಡಿದ್ದರು. ಅಂಗನವಾಡಿ ಸಹಾಯಕಿಯಾಗಿ ಸುಮಾ ಕೆಲಸ ಮಾಡುತ್ತಿದ್ದರು. ಹಲವು ವರ್ಷಗಳಿಂದ ತಮ್ಮ ಸಹೋದರ ಸಂಜು ಜೊತೆ ಆಸ್ತಿ ವ್ಯವಹಾರದ ವಿಚಾರವಾಗಿ ಭಿನ್ನಾಭಿಪ್ರಾಯಗಳಿದ್ದವು. ಇದೇ ವಿಚಾರಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ಕ ಸುಮಾಳನ್ನು ತಾರೀಹಾಳದಿಂದ ಫಾಲೋ ಮಾಡಿಕೊಂಡು ಬಂದಿದ್ದ ಆರೋಪಿ ಸಂಜಯ, ಸುಮಾ ಅಂಗನವಾಡಿ ಕೇಂದ್ರದ ಬಾಗಿಲು ತೆಗೆದು ಕಸ ಗುಡಿಸುತ್ತಿದ್ದ ವೇಳೆ ಮಚ್ಚಿನಿಂದ ಮನಬಂದಂತೆ ಹಲ್ಲೆ ಮಾಡಿ ಕೊಲೆಗೈದಿದ್ದಾನೆ. ಬಳಿಕ ಪರಾರಿಯಾಗಲು ಯತ್ನಿಸಿದ್ದು, ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಶಿಗ್ಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಾವೇರಿ ಎಸ್ಪಿ ಯಶೋಧಾ ವಂಟಗೋಡಿ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ರೇವತಿ ಹೊಸಮಠ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಬಗ್ಗೆ ಮಾತನಾಡಿರುವ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ರೇವತಿ ಹೊಸಮಠ ”ನನಗೆ ಕೊಲೆ ನಡೆದಿರುವ ಮಾಹಿತಿ ತಿಳಿದ ತಕ್ಷಣ ಇಲ್ಲಿಗೆ ಬಂದು ಭೇಟಿ ನೀಡಿ ಮಾಹಿತಿ ಪಡೆದಿದ್ದೇನೆ. ಬೆಳಗ್ಗೆ ಸುಮಾರು ೯.೩೦ಕ್ಕೆ ಅಂಗನವಾಡಿ ಕೇಂದ್ರದಲ್ಲಿ ಇರುವಾಗಲೇ ಘಟನೆ ನಡೆದಿದೆ. ಕೊಲೆಗೂ ಅಂಗನವಾಡಿಗೂ ಯಾವುದೇ ಸಂಬಂಧ ಇಲ್ಲ”. ಅಂಗನವಾಡಿಗೆ ಮಕ್ಕಳು ಬರುವ ಮುನ್ನವೇ ಕೊಲೆಯಾಗಿದೆ. ಎರಡು ವರ್ಷಗಳಿಂದ ಸುಮಾ ಅಂಗನವಾಡಿ ಸಹಾಯಕಿಯಾಗಿ ಚೆನ್ನಾಗಿ ಕೆಲಸ ಮಾಡುತ್ತಿದ್ದರು. ಅವರಿಗೆ ಅಂಗನವಾಡಿಗೆ ಸಂಬಂಧಪಟ್ಟ ಯಾವುದೇ ಸಮಸ್ಯೆ ಇರಲಿಲ್ಲ. ಕೌಟುಂಬಿಕ ಕಲಹದ ಇತ್ತು ಎಂದು ತಿಳಿದುಬಂದಿದೆ. ಆದರೆ ಇದುವರೆಗೆ ಅಂಗನವಾಡಿ ಬಳಿ ಯಾವುದೇ ಗಲಾಟೆ, ಇತರ ಘಟನೆ ಆಗಿರಲಿಲ್ಲ. ಸುಮಾಳ ತಮ್ಮನೇ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಘಟನೆ ಕಂಡು ಸುಮಾ ಜೊತೆಗಿದ್ದ ಅಂಗನವಾಡಿ ಕಾರ್ಯಕರ್ತೆ ಪ್ರಜ್ಞೆ ತಪ್ಪಿ ಬಿದ್ದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ನಮಗೂ ಆತಂಕವಾಗಿದೆ. ಅಂಗನಾಡಿ ಕೇಂದ್ರದಲ್ಲಿ ಯಾವತ್ತೂ ಇಂತಹ ಘಟನೆ ನಡೆದಿರಲಿಲ್ಲ ಎಂದು ಅವರು ತಿಳಿಸಿದರು.

