
ಬಡ ವ್ಯಾಪಾರಿಗಳಿಗೆ ಛತ್ರಿ ವಿತರಿಸುವ ಮೂಲಕ ವಿಭಿನ್ನವಾಗಿ ವಿವಾಹವಾದ ಜೋಡಿ
ಹಾವೇರಿ: ಮದುವೆ ಜೀವನದ ಪ್ರಮುಖ ಘಟ್ಟ. ವಿಭಿನ್ನವಾಗಿ ಹಸೆಮಣೆಯೇರುವ ಮೂಲಕ ಆ ದಿನವನ್ನು ಒಂದು ಸುಂದರವಾದ ನೆನಪಾಗಿಸಬೇಕು ಎಂದು ಬಯಸುವವರೇ ಹೆಚ್ಚು. ಅದರಂತೆ ಹಾವೇರಿಯ ಒಂದು ಜೋಡಿ, ತಮ್ಮ ಮದುವೆಯನ್ನು ಅದ್ಭುತ ನೆನಪಾಗಿಸಿಕೊಂಡಿದ್ದಲ್ಲದೆ, ಎಲ್ಲರೂ ನೆನಪಿಟ್ಟುಕೊಳ್ಳುವಂತೆ ಅರ್ಥಪೂರ್ಣವಾಗಿ ಮಾಡಿಕೊಂಡಿದ್ದಾರೆ.
ನಗರದ ಭಗತಸಿಂಗ್ ವಿದ್ಯಾಸಂಸ್ಥೆಯ ಅಧ್ಯಕ್ಷ ಸತೀಶ್ ಮತ್ತು ಮಹಾರಾಣಿ ಜೋಡಿ ಕಾರ್ಮಿಕ ದಿನವಾದ ಮೇ.೧ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಶಿಕ್ಷಣ ರಂಗದಲ್ಲಿ ವಿಭಿನ್ನ ಪ್ರಯೋಗಗಳ ಮೂಲಕ ಗಮನ ಸೆಳೆದಿರುವ ಸತೀಶ್ ಮದುವೆಯನ್ನು ಸಹ ತಾವು ಶಿಕ್ಷಣ ನೀಡಿದ ಸಂಸ್ಥೆಯ ಆವರಣದಲ್ಲಿ ವಿಭಿನ್ನವಾಗಿ ಆಚರಿಸುವ ಮೂಲಕ ಗಮನ ಸೆಳೆದರು.
ಕಾರ್ಮಿಕರ ದಿನದಂದೇ ಮದುವೆಯಾದ ಹಿನ್ನೆಲೆ ನಗರದ ಫುಟ್ಪಾತ್ ಮೇಲೆ ವ್ಯಾಪಾರ ಮಾಡುವ ಬಡ ವ್ಯಾಪಾರಿಗಳಿಗೆ ಉಚಿತವಾಗಿ ಸ್ಟಾಲ್ ಛತ್ರಿ ನೀಡುವ ಮೂಲಕ ಸತೀಶ್ ಮದುವೆಯನ್ನು ಇನ್ನಷ್ಟು ವಿಶಿಷ್ಟವಾಗಿಸಿಕೊಂಡರು. ಅಲ್ಲದೆ ತಮಗೆ ಇದುವರೆಗೆ ಶಿಕ್ಷಣ ನೀಡಿದ ಗುರುಗಳಿಗೆ ಗುರುವಂದನೆ ಸಲ್ಲಿಸಿದರು. ಸುಮಾರು ೨೫ಕ್ಕೂ ಅಧಿಕ ಗುರುಗಳನ್ನು ವೇದಿಕೆ ಮೇಲೆ ಕೂರಿಸಿ ಹೂವಿನ ಹಾರ ಹಾಕಿ ಸನ್ಮಾನಿಸಿದರು.
೨೦೦ ಬಡ ವರ್ತಕರಿಗೆ ಸ್ಟಾಲ್ ಛತ್ರಿ: ಸುಮಾರು ೨೦೦ ಬಡ ವ್ಯಾಪಾರಿಗಳಿಗೆ ಸತೀಶ್ ಸ್ಟಾಲ್ ಛತ್ರಿ ವಿತರಿಸಿದರು. ಪ್ರತಿದಿನ ಬಿಸಿಲು ಮಳೆ ಗಾಳಿ ಎನ್ನದೆ ಈ ವ್ಯಾಪಾರಿಗಳು ವ್ಯಾಪಾರ ನಡೆಸುತ್ತಿದ್ದಾರೆ. ಒಂದು ರೂಪಾಯಿ ಲಾಭ ಸಿಕ್ಕರೂ ಶ್ರಮಪಟ್ಟು ಇವರು ವ್ಯಾಪಾರ ನಡೆಸುತ್ತಾರೆ. ಆದರೆ ಇವರು ಮಾತ್ರ ಬಿಸಿಲು, ಮಳೆ-ಗಾಳಿ ಲೆಕ್ಕಿಸುವುದಿಲ್ಲ. ಪ್ರಸ್ತುತ ವರ್ಷ ತಾಪಮಾನ ಕಳೆದ ವರ್ಷಕ್ಕಿಂತ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಸ್ಟಾಲ್ ಛತ್ರಿ ವಿತರಿಸಿರುವುದಾಗಿ ಸತೀಶ್ ತಿಳಿಸಿದರು.
ಮದುವೆ ಮೊದಲೇ ಛತ್ರಿ ವಿತರಿಸಬೇಕು ಎಂದು ಚಿಂತನೆ ಮಾಡಿದ್ದೆ. ಈ ಕುರಿತಂತೆ ಆನಲೈನ್ಲ್ಲಿ ಬಡ ವರ್ತಕರಿಗೆ ಹೆಸರು ನೋಂದಾಯಿಸಲು ತಿಳಿಸಿದ್ದೆ. ಸುಮಾರು ೪೦೦ ಕ್ಕೂ ಅಧಿಕ ವರ್ತಕರು ಹೆಸರು ನೋಂದಾಯಿಸಿಕೊಂಡಿದ್ದರು. ಹೀಗಾಗಿ ಮದುವೆಯ ವೇದಿಕೆ ಮೇಲೆ ಸುಮಾರು ೨೦೦ ಜನರಿಗೆ ಛತ್ರಿ ವಿತರಿಸಲಾಯಿತು. ಸಾಕಷ್ಟು ಶ್ರಮಜೀವಿಗಳಾಗಿರುವ ಈ ವ್ಯಾಪಾರಿಗಳಿಗೆ ತಾತ್ಕಾಲಿಕ ನೆರಳು ನೀಡುತ್ತಿರುವುದಕ್ಕೆ ಸತೀಶ್ ಸಂತಸ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಉಳಿದ ೨೦೦ ಜನರಿಗೆ ಸ್ಟಾಲ್ ಛತ್ರಿ ವಿತರಿಸುವುದಾಗಿ ಸತೀಶ್ ತಿಳಿಸಿದರು.
ಕಲಿಸಿದ ಗುರುಗಳ ಪಾದತಲ ಸ್ಪರ್ಷಿಸಿದ ದಂಪತಿ: ಇದೇ ವೇಳೆ ಸತೀಶ್, ತಾವು ತಮಗೆ ಇದುವರೆಗೂ ಶಿಕ್ಷಣ ನೀಡಿದ ಗುರುಗಳಿಗೆ ಗುರುವಂದನ ಕಾರ್ಯಕ್ರಮ ನಡೆಸಿದರು. ಗುರುಗಳನ್ನು ವೇದಿಕೆ ಮೇಲೆ ಕೂರಿಸಿದ ಈ ದಂಪತಿಯು ಗುರುಗಳ ಪಾದಗಳನ್ನು ಮುಟ್ಟಿ ನಮಸ್ಕರಿಸಿದರು. ಶಾಲು ಹಾಕಿ, ಹೂಗುಚ್ಛ ನೀಡಿ, ಹಾರ ಹಾಕಿ, ನೆನಪಿನ ಕಾಣಿಕೆ, ಫಲಪುಷ್ಪದೊಂದಿಗೆ ಸನ್ಮಾನಿಸಿದರು. ಶಿಕ್ಷಕರು ನೂತನ ದಂಪತಿಗೆ ಹಾರೈಸಿದರು. ಸತೀಶ್ ದಂಪತಿ ಇದೇ ರೀತಿ ಸಮಾಜಮುಖಿ ಕಾರ್ಯಗಳನ್ನು ಮಾಡಲಿ ಎಂದು ಹಾರೈಸಿದರು.
ಸತೀಶ್ ಪತ್ನಿ ಮಹಾರಾಣಿ ಮಾತನಾಡಿ, ಈ ರೀತಿಯ ಬಡವರ ಕಾಳಜಿ ಇರುವ ಪತಿ ಸಿಕ್ಕಿರುವುದಕ್ಕೆ ಹೆಮ್ಮೆ ಇದೆ. ಇಂತಹ ಪತಿಯನ್ನು ಪಡೆದ ನಾನೇ ಧನ್ಯ. ಈ ದಿನ ನನಗೆ ಸಾಕಷ್ಟು ಸಂತೋಷವಾಗಿದೆ ಎಂದು ಪತಿಯ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ದಂಪತಿಗೆ ಹಾರೈಸಿದ ಬಡ ವರ್ತಕರು: ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ವಧು-ವರನಿಗೆ ಫುಟ್ಪಾತ್ ವ್ಯಾಪಾರಿಗಳು ಹಾರೈಸಿದರು. ಸತೀಶ್ ಮತ್ತು ಮಹಾರಾಣಿ ಕಾರ್ಮಿಕರ ದಿನದಂದೇ ದಿನವೇ ಮದುವೆ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ವಿವಾಹದ ಜೊತೆ ಸ್ಟಾಲ್ ಛತ್ರಿ ವಿತರಿಸುವ ಮೂಲಕ ತಮಗೆ ತಾತ್ಕಾಲಿಕ ನೆರಳು ನೀಡಲು ಮುಂದಾಗಿದ್ದಾರೆ. ಅವರ ಈ ಕಾರ್ಯ ನಮಗೆ ತುಂಬಾ ಸಂತಸ ತಂದಿದೆ ಎಂದು ಫುಟ್ಪಾತ್ ವ್ಯಾಪಾರಿಗಳು ಹರ್ಷ ವ್ಯಕ್ತಪಡಿಸಿದರು.

