
ವಚನ ಸಾಹಿತ್ಯದ ಮೂಲಕ ಸಮಾಜದ ಅಂಕು-ಡೊಂಕು ತಿದ್ದಿದ ಕವಿ ಸರ್ವಜ್ಞ
-ಅಧ್ಯಕ್ಷ ಹಿರೇಮಠ
ಹಾವೇರಿ: ತ್ರಿಪದಿ ವಚನ ಸಾಹಿತ್ಯದ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದಿದ ತ್ರಿಪದಿಕವಿ ಸರ್ವಜ್ಞ. ಎಲ್ಲರೂ ಒಂದೇ ಎಂಬ ಸಂದೇಶ ನೀಡಿದ ಅವರು ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರ ಎಂ.ಎಂ. ಹೀರೆಮಠ ಹೇಳಿದರು.
ನಗರದ ಪ್ರವಾಸಿ ತಾಣ ಗಾಂಧಿ ಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಾವೇರಿ ಜಿಲ್ಲಾ ಕುಂಬಾರ ಸಂಘದ ಸಹಯೋಗದಲ್ಲಿ ಜರುಗಿದ ತ್ರಿಪದಿಕವಿ ಸರ್ವಜ್ಞರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ವಜ್ಞ ವೈಚಾರಿಕ ತ್ರಿಪದಿಗಳ ಚಕ್ರವರ್ತಿ, ನಾಡು ಕಂಡ ಶ್ರೇಷ್ಠ ಕವಿಯಾಗಿದ್ದು, ಜೀವನದ ಸಾರವನ್ನು ತಮ್ಮ ವಚನಗಳ ಮೂಲಕ ಸರಳವಾಗಿ ತಿಳಿಸಿದ್ದಾರೆ. ಸರ್ವಜ್ಞ ಅವರು ಈ ಜಿಲ್ಲೆಯಲ್ಲಿ ಜನಿಸಿದ್ದರು ಎಂಬುದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ. ಇಂದಿನ ಯುವ ಜನತೆ ಇಂತಹ ಮಹಾನ ವ್ಯಕ್ತಿಗಳ ಕುರಿತು ತಿಳಿದುಕೊಳ್ಳಬೇಕು. ಸಮಾಜ ಸುಧಾರಣೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ ರೇವಣೆಪ್ಪ ಚಕ್ರಸಾಲಿ ಮಾತನಾಡಿ, ಸರ್ವಜ್ಞ ಅವರು ಜಾತಿ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಿದ್ದರು ಹಾಗೂ ಸಮಾಜದ ಓರೆಕೋರೆಗಳನ್ನು ಎತ್ತಿತೋರಿಸಿದ ದಿಟ್ಟ ಕವಿಯಾಗಿದ್ದರು. ಕುಂಬಾರ ಸಮುದಾಯದ ಬಹಳ ಹಿಂದುಳಿದ ಸಮುದಾಯವಾಗಿದ್ದು, ಸಮಾಜಬಾಂಧವರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಹಾಗೂ ಒಗ್ಗಟ್ಟಿನಿಂದ ಸಮಾಜದ ಏಳ್ಗೆಗಾಗಿ ಶ್ರಮಿಸಬೇಕು ಎಂದು ಹೇಳಿದರು.
ಮಲ್ಲೇಶಪ್ಪ ಗುತ್ತೆಣ್ಣನವರ ಅವರು, ತ್ರಿಪದಿಕವಿ ಸರ್ವಜ್ಞರ ಜೀವನ ಮೌಲ್ಯ, ಸಾಧನೆ ಹಾಗೂ ವಚನಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ. ಹಿರೇಮಠ, ಭೂ ಮಾಪನ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ ಚಕ್ರಸಾಲಿ ಮತ್ತು ಸರ್ವಜ್ಞ ಪ್ರಾಧಿಕಾರದ ಸದಸ್ಯರು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.

