ಚುಕುಬುಕು ರೈಲು॒….. ನಿಲ್ಲೋದಿಲ್ಲ ಇಲ್ಲಿ ಯಾಕಿಂಗೆ ಓಡುತೈತೋ……ಹಾವೇರಿ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರ
ಅಮೃತ ಭಾರತ ಯೋಜನೆಯಡಿ ಹಾವೇರಿ ರೈಲು ನಿಲ್ದಾಣ ಅಭಿವೃದ್ಧಿ- ರೈಲ್ವೆ ಅಧಿಕಾರಿ ರವಿಚಂದ್ರನ್
ಹಾವೇರಿ : ಧಾರವಾಡ-ಬೆಂಗಳೂರ ನಗರಗಳ ನಡುವೆ ಹಾವೇರಿ ಮಾರ್ಗದಲ್ಲಿ ಸಂಚರಿಸಲಿರುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ವರ್ಚುವಲ್ ಮೂಲಕ ದೆಹಲಿಯಿಂದ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಚಾಲನೆ ನೀಡಿದರು.
ಮಂಗಳವಾರ ಬೆಳಿಗ್ಗೆ ಧಾರವಾಡದಿಂದ ಸಂಚಾರ ಆರಂಭಿಸಿ ಮಧ್ಯಾಹ್ನ ೧೨-೩೦ಕ್ಕೆ ಹಾವೇರಿ ನಿಲ್ದಾಣಕ್ಕೆ ಆಗಮಿಸಿದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಸಂಚಾರ ಆರಂಭ ವರ್ಚುವಲ್ ಕಾರ್ಯಕ್ರಮದ ವಿಕ್ಷಣೆಗೆ ಹಾವೇರಿ ನಿಲ್ದಾಣದಲ್ಲಿ ವ್ಯವಸ್ಥೆ ಮಾಡಲಾಗಿತ್ತು.
ಹಾವೇರಿ ನಿಲ್ದಾಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೈಸೂರು ವಿಭಾಗದ ರೈಲ್ವೆ ಅಧಿಕಾರಿ ರವಿಚಂದ್ರನ್ ಅವರು ಮಾತನಾಡಿ, ಗಂಟೆಗೆ ೧೨೦ ಕಿ.ಮೀ. ವೇಗದಲ್ಲಿ ವಂದೇ ಭಾರತ್ ರೈಲು ಸಂಚರಿಸಲಿದೆ. ಈ ಭಾಗದ ಟ್ರ್ಯಾಕ್ ೧೧೦ವೇಗಕ್ಕೆ ಸಿದ್ಧಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ೧೩೦ ವೇಗಕ್ಕೆ ಟ್ರ್ಯಾಕ್ ಸಿದ್ಧಪಡಿಸಲಾಗುವುದು. ಅಮೃತ ಭಾರತ ಯೋಜನೆಯಡಿ ಈ ರೈಲು ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಾವೇರಿ ಪ್ರಧಾನ ಅಂಚೆ ಕಚೇರಿ ಅಧೀಕ್ಷಕ ಆರ್.ಅಶೋಕ ಅವರು ಮಾತನಾಡಿ, ಈ ರೈಲು ಆರಂಭದಿಂದ ಈ ಭಾಗದ ಜನರಿಗೆ ಹೆಚ್ಚಿನ ಅನೂಕಲವಾಗಲಿದೆ. ಹಾವೇರಿ ಪ್ರಧಾನ ಅಂಚೆ ಕಚೇರಿಯಲ್ಲಿ ರೈಲ್ವೆ ಪ್ರಯಾಣದ ಮುಂಗಡ ಟಿಕೇಟ್ ಕಾಯ್ದಿರಿಸಬಹುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಹಾವೇರಿ ವಾಣಿಜ್ಯೋದ್ಯಮ ಸಂಘದ ಉಪಾಧ್ಯಕ್ಷ ನಾಗರಾಜ ರೋಣದ ಅವರು ಮಾತನಾಡಿ, ವಂದೇ ಭಾರತ್ ರೈಲು ಸಂಚಾರ ಆರಂಭಿಸಿದ್ದು ಬಹಳ ಸಂತಸದ ಸಂಗತಿಯಾಗಿದೆ. ಹಾವೇರಿ ರೈಲು ನಿಲ್ದಾಣದಲ್ಲಿ ಈ ರೈಲು ನಿಲುಗಡೆ ಕ್ರಮವಹಿಸಬೇಕು ಎಂದು ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು.
ಎಲ್ಐಸಿ ಹಿರಿಯ ವ್ಯವಸ್ಥಾಪಕರಾದ ರಚನಾ, ಅಂಚೆ ಕಚೇರಿ ಹೆಡ್ ಮಾಸ್ಟರ್ ಮಂಜುನಾಥ ಕಳಸೂರ, ಹಿರಿಯ ವರ್ತಕ ಚನ್ನಬಸಪ್ಪ, ರೈಲ್ವೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ದಾವಣಗೆರೆ ವಿಭಾಗದ ಸಹಾಯಕ ವ್ಯವಸ್ಥಾಪಕ ಪ್ರಶಾಂತ ಸ್ವಾಗತಿಸಿದರು.
ವಂದೇ ಭಾರತ್ ರೈಲು ಜಿಲ್ಲಾ ಕೇಂದ್ರ ಸ್ಥಾನ ಹಾವೇರಿಯಲ್ಲಿ ನಿಲುಗಡೆ ಒತ್ತಾಯ
ಹಾವೇರಿ: ಬಹು ನಿರೀಕ್ಷಿತ ಧಾರವಾಡ – ಬೆಂಗಳೂರು ನಡುವಿನ ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಮಂಗಳವಾರ ಚಾಲನೆ ನೀಡಿದ್ದಾರೆ.
ಧಾರವಾಡದಿಂದ ಬೆಂಗಳೂರಿಗೆ ಪ್ರಯಾಣ ಆರಂಭಿಸಿರುವ ವಂದೇ ಭಾರತ್ ರೈಲು ಹಾವೇರಿ ನಿಲ್ದಾಣಕ್ಕೆ ಆಗಮಿಸಿತು. ಈ ವೇಳೆ ಜನರು ವಂದೇ ಭಾರತ್ ರೈಲು ನೋಡಲು ಮುಗಿಬಿದ್ದಿದ್ದರು. ಹಾವೇರಿಗೆ ಆಗಮಿಸಿದ ವಂದೇ ಭಾರತ್ ರೈಲಿಗೆ ಜನರು ಚಪ್ಪಾಳೆ ತಟ್ಟುವ ಮೂಲಕ ಸ್ವಾಗತಿಸಲಾಯಿತು.
ಮೊದಲ ದಿನವಾದ ಮಂಗಳವಾರ ದಿನನಿತ್ಯದ ನಾಲ್ಕು ನಿಲುಗಡೆ ಹೊರತುಪಡಿಸಿ ಧಾರವಾಡ – ಬೆಂಗಳೂರು ಮಾರ್ಗದ ೧೨ ನಿಲ್ದಾಣಗಳಲ್ಲಿ ವಂದೇ ಭಾರತ್ ರೈಲು ನಿಲುಗಡೆಯಾಗಲಿದೆ. ದಿನನಿತ್ಯ ನಿಲುಗಡೆಯಾಗುವ ರೈಲು ನಿಲ್ದಾಣಗಳಲ್ಲಿ ಹಾವೇರಿ ರೈಲು ನಿಲ್ದಾಣವಿಲ್ಲ. ಹಾವೇರಿ ರೈಲ್ವೆ ಅಧಿಕಾರಿಗಳು ಹಸಿರು ನಿಶಾನೆ ತೋರಿಸುವ ಮೂಲಕ ರೈಲು ಮುಂದಿನ ನಿಲ್ದಾಣಕ್ಕೆ ತೆರಳಲು ಅನುಮತಿ ನೀಡಿದರು. ಇದೇ ವೇಳೆ ಹಾವೇರಿ ರೈಲು ನಿಲ್ದಾಣದಲ್ಲಿ ಪ್ರತಿನಿತ್ಯ ವಂದೇ ಭಾರತ ರೈಲು ನಿಲುಗಡೆಯಾಗಬೇಕೆಂಬ ಕೂಗು ಕೇಳಿಬಂದಿತು.
ರೈಲು ಅಧಿಕಾರಿಗಳು ಜನಪ್ರತಿನಿಧಿಗಳು ಈ ಕುರಿತಂತೆ ಕಾರ್ಯಪ್ರವೃತ್ತರಾಗಬೇಕು. ಹಾವೇರಿ ಜಿಲ್ಲೆ ಹಲವು ವೈಶಿಷ್ಟ್ಯಗಳಿರುವ ಜಿಲ್ಲೆ. ಈ ನಿಲ್ದಾಣದಿಂದ ಬೆಂಗಳೂರಿಗೆ ಪ್ರತಿನಿತ್ಯ ನೂರಾರು ಜನರು ಕೆಲಸದ ನಿಮಿತ್ತ ತೆರಳುತ್ತಾರೆ. ಅಲ್ಲದೆ ಶಿರಸಿ ಮತ್ತು ಕುಮಟಾ ಸೇರಿದಂತೆ ಹಲವು ಪಟ್ಟಣಗಳಿಗೆ ಹಾವೇರಿ ಹತ್ತಿರವಾಗಿದೆ. ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ, ರಾಣೆಬೆನ್ನೂರು ಪ್ರಮುಖ ವ್ಯಾಪಾರ ಕೇಂದ್ರಗಳಾಗಿವೆ. ಈ ಹಿನ್ನೆಲೆಯಲ್ಲಿ ಹಾವೇರಿ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ನಿಲುಗಡೆ ಮಾಡುವಂತೆ ಸ್ಥಳೀಯರು ಒತ್ತಾಯಿಸಿದರು.
ಸ್ಥಳೀಯರಾದ ವಿಶ್ವನಾಥ್ ಮಾತನಾಡಿ, “ಹಾವೇರಿಯಲ್ಲಿ ವಂದೇ ಭಾರತ್” ರೈಲು ನಿಂತಿದ್ದು ನೋಡಿ ಜನರು ಸಂತೋಷಪಟ್ಟಿದ್ದಾರೆ. ವಂದೇ ಭಾರತ್ ರೈಲನ್ನು ಹಾವೇರಿಯಲ್ಲಿ ನಿಲ್ಲಿಸುವಂತೆ ನಮ್ಮ ಸಂಸದರು, ಎಂಎಲ್ಎಗಳು ಹಾಗೂ ರೈಲ್ವೆ ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಹಾವೇರಿಯೂ ಜಿಲ್ಲಾ ಕೇಂದ್ರವಾಗಿರುವುದರಿಂದ ಇಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ಇಲ್ಲಿಯೂ ನಿಲುಗಡೆ ಮಾಡಬೇಕು ಎಂದು ವಿನಂತಿಸಿಕೊಳ್ಳುತ್ತೇನೆ ಎಂದರು.
ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸಿದ ಪ್ರಹ್ಲಾದ್ ಜೋಶಿ, ಗೆಹ್ಲೋಟ್: ಕೇಂದ್ರ ಸರ್ಕಾರದ ಮಹತ್ವಪೂರ್ಣ ಯೋಜನೆಗಳಲ್ಲಿ ಒಂದಾಗಿರುವ ವಂದೇ ಭಾರತ್ ರೈಲು ಸಂಚಾರ ಧಾರವಾಡದಿಂದ ಆರಂಭವಾಗಿದೆ. ಲೋಕಾರ್ಪಣೆಯ ಬಳಿಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಧಾರವಾಡದಿಂದ ಹುಬ್ಬಳ್ಳಿಯವರೆಗೆ ರೈಲಿನಲ್ಲಿ ಪ್ರಯಾಣಿಸಿದರು. ವಂದೇ ಭಾರತ್? ರೈಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವರ್ಚುವಲ್ ಆಗಿ ಚಾಲನೆ ನೀಡಿದ್ದು, ಪ್ರಯೋಗಾರ್ಥವಾಗಿ ಪ್ರಯಾಣಿಸುವ ಮೂಲಕ ವಂದೇ ಭಾರತ್? ರೈಲಿನ ವೈಶಿಷ್ಟ್ಯವನ್ನು ಅನುಭವಿಸಿದರು. ರೈಲು ಸಂಚಾರದ ವೇಳೆಯಲ್ಲಿ ರಾಜ್ಯಪಾಲರು ಹಾಗೂ ಕೇಂದ್ರ ಸಚಿವರು ಉಪಹಾರ ಸೇವಿಸಿದ್ದು ವಿಶೇಷವಾಗಿತ್ತು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, “ಧಾರವಾಡದಿಂದ ವಂದೇ ಭಾರತ್ ರೈಲು ಆರಂಭವಾಗಬೇಕೆಂಬ ಬೇಡಿಕೆಯಿತ್ತು. ಅದರಂತೆ ಧಾರವಾಡದಿಂದ ವಂದೇ ಭಾರತ್ ಆರಂಭಿಸಲಾಗಿದೆ. ಹುಬ್ಬಳ್ಳಿಯಲ್ಲಿ ವಂದೇ ಭಾರತ್ ಟೆಂಡರ್ ಪ್ರಕ್ರಿಯೆ ನಡೆದಿದೆ. ನಂತರದಲ್ಲಿ ಸಮಯ ಬದಲಾವಣೆ ಮಾಡಲಾಗುತ್ತದೆ” ಎಂದರು.