
ಹಾವೇರಿಯಲ್ಲಿ ದರೋಡೆ ಮಾಡಿದ ಮೂವರು ಆರೋಪಿಗಳಿಗೆ 10 ವರ್ಷ ಶಿಕ್ಷೆ-ದಂಡ
ಹಾವೇರಿ: ಹಾವೇರಿ-ರಾಣೇಬೆನ್ನೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಗೂಡ್ಸ್ ವಾಹನ ನಿಲ್ಲಿಸಿ, ವಾಹನದಿಂದ ಕೆಳಗೆ ಇಳಿಸಿ, ಹಲ್ಲೆಮಾಡಿ ಅವರ ಬಳಿಯ ಮೊಬೈಲ್ ಫೋನ್ ಹಾಗೂ ಹಣಕಿತ್ತುಕೊಂಡು ಹಲ್ಲೆಮಾಡಿದ ಮೂರು ಜನ ಆರೋಪಿಗಳಿಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ ತಲಾ ರೂ.10 ಸಾವುರ ದಂಡ ವಿಧಿಸಿ ಸೆ. 2 ರಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿರಾದಾರ ದೇವೇಂದ್ರಪ್ಪ ಎನ್. ಅವರು ತೀರ್ಪು ನೀಡಿದ್ದಾರೆ.
ದಿ.08-08-2024 ರಂದು ರಾತ್ರಿ ಸಮಯದಲ್ಲಿ ಹಾವೇರಿ ಶಹರದ ತೋಟದ ಯಲ್ಲಾಪುರ ಬ್ರಿಡ್ಜ್ ಸಮೀಪ ಹಾವೇರಿ-ರಾಣೇಬೆನ್ನೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಗೂಡ್ಸ್ ವಾಹನ ನಿಲ್ಲಿಸಿ, ವಾಹನದಲ್ಲಿದ್ದ ಇಬ್ಬರನ್ನು ಕೆಳಗೆ ಜಗ್ಗಿ ಎಳೆದು, ರಾಡ್ಬನಿಂದ ಹೊಡೆದು, ಎರಡು ಮೊಬೈಲ್ ಹಾಗೂ ಹಣವನ್ನು ಕಿತ್ತುಕೊಂಡು ಹೋಗಿ, ಮೊಬೈಲ್ನ್ನು ರೂ.2000/-ಕ್ಕೆ ಮಾರಿದ ಸಾಕ್ಷಿ ಪುರಾವೆಗಳು ಸಾಬೀತಾಗಿತ್ತು.
ಈ ಪ್ರಕರಣದಲ್ಲಿ ಆರೋಪಿತರಾದ ದೇವಿಹೊಸೂರ ಗ್ರಾಮದ ಪ್ರವೀಣ ಬಸವರಾಜ ಕಟ್ಟಿಮನಿ, ಹಾವೇರಿಯ ಸಾಗರ ರಾಮಪ್ಪ ಕಟ್ಟಿಮನಿ, ಸೊರಬ ನಿವಾಸಿ ಕೃಷ್ಣಪ್ಪ ಜಯಪ್ಪ ಇವರುಗಳ ಮೇಲೆ ಎಸಗಿದ ಆಪಾದನೆಗಳಾದ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಕಲಂ 309(4)311ರ ಅಡಿಯಲ್ಲಿ ಆಪಾದನೆಗಳನ್ನು ಅಭಿಯೋಜನೆಯು ರುಜುವಾತು ಪಡಿಸಿದೆ.
ಹಾವೇರಿ ಪೊಲೀಸ್ ಠಾಣೆಯ ಪಿ.ಐ ಮೋತಿಲಾಲ್ ಪವಾರ ಅವರು ತನಿಖೆ ಕೈಗೊಂಡು, ಆರೋಪಿತರ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಅಭಿಯೋಜನೆ ಪರವಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಸಿದ್ಧಾರೂಢ ಎಂ.ಗೆಜ್ಜಿಹಳ್ಳಿ ಅವರು ವಾದ ಮಂಡಿಸಿದ್ದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

