
ಬಂಜಾರ ಸಮುದಾಯಕ್ಕೆ ಸಚಿವ ಸ್ಥಾನ ನೀಡದಿರುವುದು ಸಿದ್ದರಾಮಯ್ಯ ಸರ್ಕಾರಕ್ಕೆ ಕಪ್ಪು ಚುಕ್ಕೆ: ರುದ್ರಪ್ಪ ಲಮಾಣಿ
ಹಾವೇರಿ: ಇದುವರೆಗೆ ಅಡಳಿತ ನಡೆಸಿದ ಸರ್ಕಾರಗಳಲ್ಲಿ ಬಂಜಾರ ಸಮುದಾಯಕ್ಕೆ ಸಚಿವ ಸ್ಥಾನ ನೀಡಲಾಗಿತ್ತು. ಆದರೆ, ಸಿದ್ದರಾಮಯ್ಯ ಸರ್ಕಾರದಲ್ಲಿ ನೀಡಿಲ್ಲ. ಈ ಕಪ್ಪು ಚುಕ್ಕೆ ಈ ಸರ್ಕಾರಕ್ಕೆ ಬರುತ್ತೆ. ನಾಳೆ ನಾವು ಮತದಾನಕ್ಕೆ ಹೋದಾಗ ಬಂಜಾರ ಸಮುದಾಯದವರು ನಮ್ಮವರನ್ನ ಸಚಿವರನ್ನಾಗಿ ಮಾಡಿಲ್ಲವಲ್ಲ ಅಂತ ಜನ ಕೇಳೆ ಕೇಳಿದರೆ ಉತ್ತರಿಸುವುದು ಕಷ್ಟ ಎಂದು ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿಧಾನಸಭೆ ಉಪಸಭಾಪತಿ ಮಾಡುವಾಗ ನಾನು ಸಚಿವ ಸ್ಥಾನದ ಬೇಡಿಕೆ ಇಟ್ಟಿದ್ದೆ. ಆಗ ಸಿಎಂ, ಡಿಸಿಎಂ, ಎಐಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಸದ್ಯಕ್ಕೆ ಉಪಸಭಾಪತಿಯಾಗುವಂತೆ ಹಾಗೂ ಮುಂದೆ ಸಚಿವ ಸಂಪುಟ ವಿಸ್ತರಣೆಯಾದಾಗ ಸಚಿವ ಸ್ಥಾನ ಕೊಡುವುದಾಗಿ ಭರವಸೆ ನೀಡಿದ್ದರು. ಭರವಸೆ ಹಾಗೆಯೇ ಇದೆ.
ಹಾವೇರಿ ಜಿಲ್ಲೆಯ ಕೋಟಾದಲ್ಲಿ ೫ ಸಚಿವ ನೀಡಬೇಕು. ಆದರೆ, ಅವರಿಗೆ ಕೊಡಿ ಇವರಿಗೆ ಕೊಡಬೇಡಿ ಅಂತ ನಾನು ಹೇಳುವುದಿಲ್ಲ. ಹಿರಿಯರಿದ್ದರೆ ಕೊಡಿ. ಆದರೆ, ರಾಜ್ಯದ ಲಂಬಾಣಿ ಸಮಾಜದ ಪರವಾಗಿ ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಹೀಗಾಗಿ ನಾನು ದೆಹಲಿಗೆ ಹೋಗಿಲ್ಲ ಎಂದು ರುದ್ರಪ್ಪ ಲಮಾಣಿ ಹೇಳಿದರು.
”ಹೆರಲು ಸಿದ್ದವಾದವಳು ನೋವು ತಿನ್ನಲು ಸಹ ಸಿದ್ದವಾಗಿರಬೇಕು” ಎಂದು ಅವರು ಉಪಚುನಾವಣೆ ಮುಗಿಯುತ್ತಿದ್ದಂತೆ ಸಚಿವ ಸ್ಥಾನದ ಕೆಲವು ಅಕಾಂಕ್ಷಿತರು ದೆಹಲಿಗೆ ತೆರಳಿದ್ದು, ಎಐಸಿಸಿ ಅಧ್ಯಕ್ಷರನ್ನು ಭೇಟಿಯಾಗಿದ್ದಾರೆ. ದೆಹಲಿಗೆ ಬರುತ್ತೇವೆ ಎಂದು ಹೇಳಿದಾಗ ಬನ್ನಿ ಅಂತಾರೆ. ಅದರಂತೆ ಇವರು ಹೋಗಿ ತಮ್ಮ ಅಹವಾಲು ಸಲ್ಲಿಸಿದ್ದಾರೆ. ಸಚಿವರನ್ನ ಮಾಡುವುದು ಹೈಕಮಾಂಡ್ಗೆ ಬಿಟ್ಟಿದ್ದು ಎಂದು ಲಮಾಣಿ ತಿಳಿಸಿದರು.
ಸಂಪುಟ ವಿಸ್ತರಣೆ ಆಗುತ್ತೋ ಇಲ್ಲೋ ಗ್ಯಾರಂಟಿ ಇಲ್ಲ. ಬರೀ ದೆಹಲಿ ಹೋಗುವುದು – ಬರುವುದು ಮಾಡುವ ಮೂಲಕ ವಿಮಾನಕ್ಕೆ ದುಡ್ಡು ಹಾಕುವುದಾಕುವುದಾಗಿದೆ. ಕಳೆದ ಬಾರಿ ಸಚಿವ ಸ್ಥಾನ ನೀಡುವಾಗ ಯಾರನ್ನು ಭೇಟೆಯಾಗಿರಲಿಲ್ಲ. ಅವರೇ ಕರೆದು ನನಗೆ ಸಚಿವ ಸ್ಥಾನ ನೀಡಿದ್ದರು ಎಂದು ಉಪಸಭಾಪತಿಗಳು ಕೆಲವು ಘಟನೆಗಳನ್ನು ಸ್ಮರಿಸಿಕೊಂಡರು.
ಸದ್ಯ ನನಗೆ ನೆಮ್ಮದಿ ಇದೆ. ಏಕೆಂದರೆ ನಮ್ಮ ಸಮುದಾಯದಿಂದ ನಾನೊಬ್ಬನೇ ಶಾಸಕ ಇದ್ದೇನೆ. ಬಿಜೆಪಿ – ಜೆಡಿಎಸ್ ಪಕ್ಷ ಅಡಳಿತದಲ್ಲಿದ್ದಿದ್ದರೆ ನಮ್ಮವರನ್ನು ಯಾರನ್ನಾದರೂ ಮಂತ್ರಿ ಮಾಡುತ್ತಿದ್ದರು. ಬಂಜಾರ ಸಮುದಾಯಕ್ಕೆ ಪ್ರಾತಿನಿದ್ಯ ನೀಡುತ್ತಿದ್ದರು. ಈಗ ನಾನು ಎಲ್ಲಿ ಹೋದರು ನಮ್ಮ ಜನ ಕೇಳುತ್ತಿದ್ದಾರೆ. ಉಪಚುನಾವಣೆಯಲ್ಲಿ ಪ್ರಚಾರಕ್ಕೆ ಹೋದಾಗ ಸಹ ನಮ್ಮ ಸಮುದಾಯದವರು ಪ್ರಶ್ನಿಸಿದರು. ಈ ಸಲ ಕೊಟ್ಟಿಲ್ಲ. ಆದರೆ, ಮಾತು ಕೊಟ್ಟಿದ್ದಾರೆ. ಕೊಡಬಹುದು ಅನ್ನೋ ಭರವಸೆ ಇದೆ ಎಂದು ರುದ್ರಪ್ಪ ಲಮಾಣಿ ವಿಶ್ವಾಸ ವ್ಯಕ್ತಪಡಿಸಿದರು.
ನುಡಿದಂತೆ ನಡೆಯಬೇಕು: ಮಾತು ಕೊಟ್ಟವರು ನುಡಿದಂತೆ ನಡೆಯಬೇಕು. ಜಿಲ್ಲೆಯಲ್ಲಿ ಯಾರಿಗೆ ಬೇಕೋ ಅವರಿಗೆ ಸಚಿವ ಸ್ಥಾನ ನೀಡಬಹುದು. ಜಿಲ್ಲೆಗೆ ಒಂದೇ ನೀಡಬೇಕು ಅಂತ ಇಲ್ಲ. ಎರಡ್ಮೂರು ಸಚಿವ ಸ್ಥಾನ ನೀಡಿದರೂ ನೀಡಬಹುದು. ಜನರಲ್ ಆಗಿ ಯಾರಿಗೆ ಕೊಟ್ಟರೂ ಸರಿಯೇ. ಲಂಬಾಣಿ ಸಮುದಾಯದ ಪರವಾಗಿ ನಮಗೆ ಸಚಿವ ಸ್ಥಾನ ಕೊಡಿ ಅನ್ನೋದು ನನ್ನ ವಾದ. ಕನ್ಸಿಡರ್ ಮಾಡಬಹುದು ಅನ್ನೋ ಭರವಸೆ ಇದೆ. ನಾವು ಯಾರೂ ಸನ್ಯಾಸಿ ಅಲ್ಲ ಎಂದರು.

